ಬೆಳಗಿನ ಜಾವ ಕಾಡಾನೆ ದಾಳಿ: ಅರಣ್ಯ ವಾಚರ್ ಸ್ಥಳದಲ್ಲಿಯೇ ಮೃತ್ಯು
ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ದೊಡ್ಡಬಂಡೆ ಬಳಿ ಶುಕ್ರವಾರ ಬೆಳಗಿನ ಜಾವ ಕಾಡಾನೆ ದಾಳಿಯಿಂದಾಗಿ ಅರಣ್ಯ ವಾಚರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟ ಅರಣ್ಯ ಇಲಾಖೆಯ ವಾಚರ್ನನ್ನು ಚಿಕ್ಕಮಾದಯ್ಯ (54) ಎಂದು ಗುರುತಿಸಲಾಗಿದೆ.
ಚಿಕ್ಕಮಾದಯ್ಯ ಸುಮಾರು 20 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯದ ಬೀಟ್ಗಾಗಿ ತಂಡದೊಂದಿಗೆ ತೆರಳಿ ಗುರುವಾರ ರಾತ್ರಿ ಪಹರೆ ನಡೆಸುತ್ತಿದ್ದರು. ಬೆಳಗಿನ ಜಾವ ದೊಡ್ಡಬಂಡೆಯಿಂದ ಪಕ್ಕಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದರಿಂದ ಚಿಕ್ಕಮಾದಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.




