ಅಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಕಾಣಿಸಿಕೊಂಡ ಕಾರು: ಕಾರಿನಲ್ಲಿ ಇಬ್ಬರ ಮೃತದೇಹ ಪತ್ತೆ
ಭೋಪಾಲ : ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಕುವಾರಿ ಗೋಪಿ ಗ್ರಾಮದಲ್ಲಿ ಮಲಯಾಳಂನ ಪ್ರಸಿದ್ಧ ದೃಶ್ಯಂ ಚಿತ್ರದ ದೃಶ್ಯವೊಂದರ ಮಾದರಿಯ ಘಟನೆ ಸಂಭವಿಸಿದೆ.
ಅಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ತಳದಲ್ಲಿ ಕಾರೊಂದು ಕಾಣಿಸಿಕೊಂಡಿದ್ದು, ಅದರೊಳಗೆ ಪುರುಷ ಮತ್ತು ಮಹಿಳೆಯ ಅಸ್ಥಿಪಂಜರವಿತ್ತು.
ಮಾಹಿತಿ ಪಡೆದ ಸಿಹೋನಿಯಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರಗಳ ಗುರುತು ಪತ್ತೆಹಚ್ಚಲಾಗಿದ್ದು, ಯುವಕ ರ್ಛಕಾಪುರದ ಜಗದೀಶ್ ಜಾತವ್ ಎಂಬವರ ಪುತ್ರ ನೀರಜ್(26) ಮಹಿಳೆ ಮತ್ತು ಛರ್ಕಾಪುರದ ಮುಖೇಶ್ ಜಾತವ್ ಎಂಬವರ ಪತ್ನಿ ಮಿಥಿಲೇಶ್ (32) ಎಂದು ಪೊಲೀಸರು ತಿಳಿಸಿದ್ದಾರೆ.
ನೀರಜ್ ಜಾತವ್ ಮತ್ತು ಮಹಿಳೆಯ ಪತಿ ಮುಖೇಶ್ ಜಾತವ್ ಸೋದರ ಸಂಬಂಧಿಗಳು. ಮಹಿಳೆಯ ಪತಿ ಅಂಬಾದಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಗುರುದ್ವಾರ ಮೊಹಲ್ಲಾ ಅಂಬಾದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು.
ಶಿಕ್ಷಕ ಮುಖೇಶ್ ಜಾತವ್ ಫೆಬ್ರವರಿ ತಿಂಗಳಲ್ಲಿ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪತ್ನಿ ಮಿಥಿಲೇಶ್ ನಾಪತ್ತೆ ದೂರು ದಾಖಲಿಸಿದ್ದರು. ಅದೇ ಸಮಯದಲ್ಲಿ ನೀರಜ್ ಜಾತವ್ ಕೂಡ ಮನೆಯಿಂದ ನಾಪತ್ತೆಯಾಗಿದ್ದರು. ಆದರೆ ಯುವಕನ ಕುಟುಂಬ ದೂರು ನೀಡಿರಲಿಲ್ಲ. ಇದು ಮರ್ಯಾದಾ ಹತ್ಯೆಯೋ ಅಥವಾ ಅಕಸ್ಮಾತ್ ಆಗಿ ಕಾರು ನದಿಗೆ ಬಿದ್ದಿದೆಯೋ ಎಂಬುದು ತಿಳಿದುಬಂದಿಲ್ಲ.




