ಜೂ. 3 ವಿಧಾನಪರಿಷತ್ ಚುನಾವಣೆ ಹಿನ್ನೆಲೆ: ಸೋಮವಾರದ ಸಂತೆ ರದ್ದುಮಾಡಿದ ಅಧಿಕಾರಿಗಳು: ಸಂತೆ ರದ್ದು ಇಲ್ಲ: ಶಾಸಕ ಅಶೋಕ್ ರೈ
ಪುತ್ತೂರು: ಜೂ. 3 ರಂದು ನಡೆಯುವ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಿ ಅಧಿಕಾರಿಗಳು ಆದೇಶ ಮಾಡಿದ್ದು, ಈ ಆದೇಶವನ್ನು ರದ್ದು ಮಾಡಿ ಸಂತೆ ಎಂದಿನಂತೆ ಅದೇ ಜಾಗದಲ್ಲಿ ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ತಾ.ಪಂ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ವಾರದ ಸಂತೆಯನ್ನು ರದ್ದು ಮಾಡಲಾಗಿತ್ತು. ಸಂತೆ ರದ್ದು ಮಾಡಿರುವ ಬಗ್ಗೆ ವ್ಯಾಪಾರಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದರು. ವಾರದವ ಸಂತೆ ರದ್ದು ಮಾಡಿದಲ್ಲಿ ಅನೇಕ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡ ಶಾಸಕರು ಪುತ್ತೂರು ಸಹಾಯಕ ಕಮಿಷನರ್ ಜೊತೆ ಮಾತುಕತೆ ನಡೆಸಿವಾರದ ಸಂತೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬೇಡಿ. ಚುನಾವಣೆ ನೆಪದಲ್ಲಿ ಸಂತೆ ರದ್ದು ಮಾಡಬೇಡಿ. ಸಂತೆ ವ್ಯಾಪಾರವನ್ನೇ ನಂಬಿ ಬದುಕು ಸಾಗಿಸುವ ಅನೇಕ ಕುಟುಂಬಗಳಿವೆ ಅವರಿಗೆ ತೊಂದರೆಯಾಗಬಾರದು ಮತ್ತು ಸಂತೆ ಯಿಂದ ತರಕಾರಿ ಹಾಗೂ ಇತರ ಸಾಮಾಗ್ರಿ ಕೊಂಡೊಯ್ಯುವವರೂ ಇದ್ದಾರೆ. ಅವರಿಗೂ ಸಂತೆ ಇಲ್ಲದೆ ತೊಂದರೆಯಾಗಬಹುದು, ಈ ಕಾರಣಕ್ಕೆ ಸಂತೆಯನ್ನು ಅದೇ ಸ್ಥಳದಲ್ಲಿ ನಡೆಸುವಂತೆ ಮತ್ತು ರದ್ದು ಆದೇಶವನ್ನು ಹಿಂಪಡೆಯುವಂತೆಯೂ ಶಾಸಕರು ಸೂಚನೆ ನೀಡಿದ್ದಾರೆ.




