ಕಡಬ: ಮನೆಯೊಳಗೆ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿ
ಕಡಬ: ಹಾಡಹಗಲೇ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದ ಡಬಲ್ ಕಟ್ಟೆಯಲ್ಲಿ ನಡೆದಿದೆ.
ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬಲ್ ಕಟ್ಟೆ ಸೀತಮ್ಮ ಎಂಬವರು ಮನೆಗೆ ಬಾಗಿಲು ಹಾಕಿ ಪಕ್ಕದ ಮನೆಗೆ ಹೋಗಿದ್ದರು. ಇದೇ ವೇಳೆ ಮನೆಯೊಳಗೆ ಸದ್ದು ಕೇಳಿತ್ತೆಂದು ಮನೆಗೆ ಬಂದಾಗ ಇಬ್ಬರು ಕಳ್ಳರು ಮನೆಯೊಳಗೆ ಹಿಂದಿನ ಬಾಗಿಲಿನಿಂದ ನುಗ್ಗಿದ್ದು ಕಂಡು ಬಂದಿದೆ.
ಇದೇ ವೇಳೆ ದುಷ್ಕರ್ಮಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಸಿದು ಪರಾರಿಯಾಗಿದ್ದಾರೆ. ಇಬ್ಬರು ಕಳ್ಳರು ಬೈಕಿನಲ್ಲಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಚುರುಕುಗೊಳಿಸಿದ್ದಾರೆ.




