ಆನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿ
ಮೈಸೂರು: ಆನೆ ದಾಳಿಗೆ ಅರಣ್ಯ ಸಿಬ್ಬಂದಿ ಬಲಿಯಾದ ಘಟನೆ ಮೈಸೂರಿನ ಮಲೆಯೂರು ರೇಂಜ್ ಕಬ್ಬೇಪುರ ಹಾಡಿಯಲ್ಲಿ ನಡೆದಿದ್ದು, ಅರಣ್ಯ ವೀಕ್ಷಕ ರಾಜು ಅವರು ಆನೆ ದಾಳಿಗೆ ಬಲಿಯಾಗಿದ್ದಾರೆ.
ಮಲೆಯೂರು ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದ್ದು, ರಾಜು ಅವರನ್ನ ಕಾಲಡಿ ಹಾಕಿ ತುಳಿದು ಕೊಂದಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಜನರೂ ಕೂಡಾ ರೋಸಿ ಹೋಗಿದ್ದಾರೆ. ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಜನರು ಜೀವ ಕೈಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಿನಿಂದ ನಾಡಿಗೆ ಬಂದು ತೋಟಗಳಿಗೆ ಲಗ್ಗೆ ಇಡುತ್ತಿದ್ದ ಆನೆಗಳು ಇದೀಗ ಗ್ರಾಮಗಳಲ್ಲೂ ರಾಜಾರೋಷವಾಗಿ ಓಡಾಡಲು ಆರಂಭಿಸಿದೆ. ಗುರುವಾರ ಬೆಳ್ಳಂಬೆಳಗ್ಗೆ ಚಾಮರಾಜ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಯ ಟಾರ್ಪಲ್ ಕಿತ್ತೆಸೆದು ಆನೆ ದಾಂಧಲೆ ನಡೆಸಿತ್ತು. ಆಹಾರ ಅರಸಿ ಕಾಡಿನಿಂದ ರಸ್ತೆಗಿಳಿದ ಒಂಟಿ ಸಲಗ. ಅರ್ಧ ತಾಸು ಟ್ರಾಫಿಕ್ ಜಾಂ ಮಾಡಿ ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಇದೀಗ ಮೈಸೂರು ಭಾಗದಲ್ಲೇ ಅರಣ್ಯ ಸಿಬ್ಬಂಧಿಯನ್ನೇ ಇನ್ನೊಂದು ಆನೆ ಬಲಿ ತೆಗೆದುಕೊಂಡಿದೆ. ಹೀಗಾಗಿ ತಕ್ಷಣ ಆನೆಗಳಿಂದ ಜನರಿಗೆ ರಕ್ಷಣೆ ಕೊಡುವ ಕೆಲಸ ಸರ್ಕಾರ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.




