February 3, 2026

ಕುಂದಾಪುರ: ಸೇತುವೆ ಬಳಿ ಮಗು ಎಸೆದು ಹೋದ ದಂಪತಿ:
ಕಟುಕ ದಂಪತಿಯನ್ನು ಬಂಧಿಸಿದ ಪೊಲೀಸರು

0
image_editor_output_image942830233-1638677050869

ಕುಂದಾಪುರ: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ವಾರಾಹಿ ಸೇತುವೆ ಬಳಿ ಡಿ.1ರಂದು ಪತ್ತೆಯಾದ ಹೆಣ್ಣು ನವಜಾತ ಶಿಶುವನ್ನು ಎಸೆದು ಹೋದ ಕಟುಕ ದಂಪತಿಯನ್ನು ಅಮಾಸೆಬೈಲು ಪೊಲೀಸರು ಡಿ.4ರಂದು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳನ್ನು ಹೆಬ್ರಿ ಸಮೀಪದ ಕುಚ್ಚೂರು ಎಸ್ಟೇಟ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೈಂದೂರು ತಾಲೂಕು ಜಡ್ಕಲ್ ಸಮೀಪದ ಮುದೂರು ಗ್ರಾಮದ ಸತೀಶ ಪೂಜಾರಿ(43) ಮತ್ತು ರಾಧಿಕ (40) ದಂಪತಿ. ಆರೋಪಿ ಇಬ್ಬರಿಗೂ ಕೂಡ ಹಿಂದೆ ಮದುವೆಯಾಗಿದ್ದು, ಸಂಸಾರದಿಂದ ದೂರವಾಗಿದ್ದಾರೆ. ಸತೀಶ ಪೂಜಾರಿಯ ಹೆಂಡತಿ ಮಕ್ಕಳು ಅವರನ್ನು ತೊರೆದು ಹೋಗಿದ್ದರು. ರಾಧಿಕ ಅವಳ ಗಂಡ ಡೈವರ್ಸ್ ನೀಡಿದ್ದರಿಂದ ದೂರವಾಗಿದ್ದರು. ಹೀಗಿರುವಾಗ ಕೆಲಸ ಮಾಡುವ ಸ್ಥಳದಲ್ಲಿ ಅವರ ನಡುವೆ ಪರಸ್ಪರ ಸ್ನೇಹ ಬೆಳೆದು, ಕಳೆದ ಒಂದು ವರ್ಷದ ಹಿಂದೆ ಯಾರಿಗೂ ಹೇಳದೆ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿರುವ ಬಗ್ಗೆ ತನಿಖೆಯ ವೇಳೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಧಿಕ ಗರ್ಭಿಣಿಯಾಗಿದ್ದು, ಹಾಲಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ದಂಪತಿಗಳು ಮಗು ಬೇಡ ಎಂದು ತೀರ್ಮಾನಿಸಿದ ಇಬ್ಬರು ಮಗುವನ್ನು ಕೈ ಚೀಲದಲ್ಲಿ ಹಾಕಿಕೊಂಡು ಬೈಕಿನಲ್ಲಿ ಬಂದು ಪೊದೆಗೆ ಎಸೆದು ಹೋಗಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ತನಿಖೆಯ ತಂಡಕ್ಕೆ ಒಂದಿಷ್ಟು ಪುರಾವೆಗಳು ಸಿಕ್ಕಿದ್ದವು. ದ್ವಿಚಕ್ರ ವಾಹನದಲ್ಲಿ ಬಂದ ಪುರುಷ ಹಾಗೂ ಮಹಿಳೆ ಮಗು ಎಸೆದಿರಬಹುದೆಂಬ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಮೂಲಕ ಸಾಗಿದ ತನಿಖೆ ಸಿಸಿ ಟಿವಿ ದೃಶ್ಯಾವಳಿ, ಕೆಲವು ತಾಂತ್ರಿಕ ಸಾಕ್ಷ್ಯಗಳ ಮೂಲಕ ಸಾಗಿದಾಗ ಇಬ್ಬರು ಲಾಕ್ ಆದರು.

ಘಟನೆ ಹಿನ್ನಲೆ:
ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಕಳಿನಜೆಡ್ಡು ವಾರಾಹಿ ಸೇತುವೆ ಬಳಿ ಡಿ.1ರಂದು ಪತ್ತೆಯಾದ ಹೆಣ್ಣು ನವಜಾತ ಶಿಶುವನ್ನು ಪತ್ತೆಯಾಗಿತ್ತು. ಹೆಣ್ಣು ನವಜಾತ ಶಿಶುವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ರಕ್ಷಣೆ ಮಾಡಲಾಗಿತ್ತು.
7ದಿನದ ಹೆಣ್ಣು ನವಜಾತ ಶಿಶುವನ್ನು ಕಳಿನಜೆಡ್ಡು ವಾರಾಹಿ ಸೇತುವೆ ಬಳಿ ಕಂದಕದಲ್ಲಿರುವ ಮುಳ್ಳಿನ ಪೊದೆಗೆ ಎಸೆದು ಹೋದ ಅಮಾನವೀಯ ಘಟನೆಯ ಬಗ್ಗೆ ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ಗೀತಾ ಅವರು ಪೊಲೀಸರಿಗೆ ದೂರು ನೀಡಿದರು.

Leave a Reply

Your email address will not be published. Required fields are marked *

error: Content is protected !!