ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸಿದ ಅರ್ಚಕರು
ಉತ್ತರ ಪ್ರದೇಶ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದ್ದು, ಇದಾದ ಬಳಿಕ ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು.
ಮಾಹಿತಿಯ ಪ್ರಕಾರ, ನ್ಯಾಯಾಲಯದ ಆದೇಶದ ಬಳಿಕ ಪೂಜೆಗೆ ಸಿದ್ಧತೆಗಳನ್ನು ಮಾಡಲಾಯಿತು. ಅಲ್ಲದೆ ಪೂಜೆಯ ವೇಳೆಗೆ ಜ್ಞಾನವಾಪಿಯ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಯಿತು.
ಈ ಎಲ್ಲಾ ಬೆಳವಣಿಗೆಯನ್ನು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಎಕ್ಸ್ನಲ್ಲಿ ದೃಢಪಡಿಸಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗಿದೆ. ಜ್ಞಾನವಾಪಿ ಆವರಣದ ಸರ್ವೆ ವೇಳೆ ದೊರೆತ ಮೂರ್ತಿಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿ, ಬಳಿಕ ಅರ್ಚಕರು ವಿಗ್ರಹಗಳಿಗೆ ಶಯನ ಆರತಿ ಮಾಡಿದರು. ಮುಂಭಾಗದಲ್ಲಿ ಅಖಂಡ ಜ್ಯೋತಿ ಬೆಳಗಲಾಯಿತು. ಈ ವೇಳೆ ಜ್ಞಾನವಾಪಿಯಾ ಸುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ. ಗುರುವಾರದಿಂದ, ಜ್ಞಾನವಾಪಿ ಸಂಕೀರ್ಣದಲ್ಲಿ ಯಥಾ ಪ್ರಕಾರ ಪೂಜೆ, ಮಂಗಳಾರತಿ ನಡೆಯಲಿದೆ ಎಂದು ಹೇಳಲಾಗಿದೆ.


