1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯ ಉದ್ಘಾಟನೆಗೆ ತೆಂಗಿನಕಾಯಿ ಒಡೆದಾಗ ರಸ್ತೆ ಬಿರುಕು
ಲಖನೌ: ಉತ್ತರ ಪ್ರದೇಶದ ಬಿಜನೋರ್ ಸದಾರ್ನಲ್ಲಿ ಸುಮಾರು ₹1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 7 ಕಿ.ಮೀ. ರಸ್ತೆಯೊಂದರ ಉದ್ಘಾಟನೆ ವೇಳೆ ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆದಾಗ ಅದು ಹೋಳಾಗದೆ ರಸ್ತೆಗೇ ಹಾನಿಯಾದ ಘಟನೆ ನಡೆದಿದೆ.
ಗುರುವಾರ ಸಂಜೆ ಉದ್ಘಾಟನೆಗೆ ಬಂದಿದ್ದ ಬಿಜನೋರ್ ಸದಾರ್ ಕ್ಷೇತ್ರದ ಬಿಜೆಪಿ ಶಾಸಕಿ ಸುಚಿ ಮೌಸಮ್ ಚೌಧರಿ ಅವರು ತೆಂಗಿನಕಾಯಿ ಒಡೆಯುವ ಪ್ರಹಸನದ ಬಳಿಕ ಸ್ಥಳದಲ್ಲೇ ಧರಣಿ ಕುಳಿತಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದ ಶಾಸಕಿ ಸುಚಿ ಅವರು ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ತಜ್ಞರ ತಂಡ ಆಗಮಿಸಿ, ರಸ್ತೆಯ ಮಾದರಿಯನ್ನು ತೆಗೆದುಕೊಂಡು ಹೋಗುವ ವರೆಗೆ ಸುಮಾರು 3 ಗಂಟೆಗಳ ಕಾಲ ಶಾಸಕಿ ಸುಚಿ ಅವರು ಸ್ಥಳದಲ್ಲೇ ಧರಣಿ ಕುಳಿತಿದ್ದರು.
ರಸ್ತೆಯನ್ನು ಅಗೆದು ಮಾದರಿ ಸಂಗ್ರಹಿಸಲು ಸ್ವತಃ ಶಾಸಕಿ ನೆರವು ನೀಡಿದರು. ಬಳಿಕ ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ, ಕಾರಣೀಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
‘ನೀರಾವರಿ ವಿಭಾಗದಿಂದ ₹1.16 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. 7 ಕಿ.ಮೀ ಉದ್ದದ ರಸ್ತೆಯನ್ನು ಉದ್ಘಾಟಿಸಲು ನನ್ನನ್ನು ಆಹ್ವಾನಿಸಿದ್ದರು. ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಾಗ ಅದು ಹೋಳಾಗುವ ಬದಲು ರಸ್ತೆಗೇ ಹಾನಿಯಾಗಿದ್ದು ಕಂಡುಬಂತು. ರಸ್ತೆಯ ಮೇಲ್ಭಾಗ ಕಿತ್ತುಬಂತು’ ಎಂದು ಶಾಸಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ.





