ರಾಜ್ಯದ 30 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ: ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ವಶ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಂಡ್ಯ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 30 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರದಲ್ಲಿ 10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 30 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ.
ಬೆಸ್ಕಾಂ ಕಚೇರಿಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದ ಎಂ.ಎಲ್ ನಾಗರಾಜ್ ಮನೆ, ಕಚೇರಿಗಳ ಮೇಲೂ ದಾಳಿ ನಡೆದಿದೆ. ಕೆಲ ದಿನಗಳ ಹಿಂದೆ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ನಾಗರಾಜ್ ಕಳೆದ ಒಂದೂವರೆ ತಿಂಗಳಿನಿಂದ ಅಮಾನತಿನಲ್ಲಿದ್ದರು.
ಈಗ ಆತನ ಮನೆಯ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಹಲವು ಆಸ್ತಿಗಳನ್ನ ಬಯಲಿಗೆಳೆದಿದ್ದಾರೆ. ನಾಗರಾಜ್ ಈ ಹಿಂದೆ ವಾಣಿಜ್ಯ ಲೈಸೆನ್ಸ್ ಕೊಡುವ ವಿಚಾರಕ್ಕೆ 7.50 ಲಕ್ಷ ರೂ. ಲಂಚ ಕೇಳಿದ್ದರು. ನಾಗರಾಜ್ ಪರವಾಗಿ ಡ್ರೈವರ್ ಮುರಳಿಕೃಷ್ಣ 7 ಲಕ್ಷ ರೂ. ಪಡೆದಿದ್ದ, ಹಣ ಪಡೆಯುವಾಗಲೇ ಸಿಕ್ಕಿಬಿದ್ದಿದ್ದರಿಂದ ನಾಗರಾಜ್ ಅವರನ್ನ ಒಂದೂವರೆ ತಿಂಗಳಿನಿಂದ ಅಮಾನತ್ತಿನಲ್ಲಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.




