ಉಡುಪಿ: ಕಾಪು ಲೀಲಾಧರ ಶೆಟ್ಟಿಯ ಮಗಳ ಅಪಹರಣ ಪ್ರಕರಣ, ನಾಲ್ವರ ಬಂಧನ
ಉಡುಪಿ: ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ಅವರ ಸಾಕು ಮಗಳು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ಆಕೆಯ ಸ್ನೇಹಿತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳು ಹಾಗೂ ಲೀಲಾಧರ ಶೆಟ್ಟಿಯವರ ಸಾಕು ಪುತ್ರಿಯನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಈಕೆಯ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ನಾಪತ್ತೆಯಾಗಲು ಸಹಕರಿಸಿದವರಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಬಂಧಿತರಾಗಿದ್ದಾರೆ. ಲೀಲಾಧರ ಶೆಟ್ಟಿಯವರು 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದದ್ದು ಆಕೆ ಡಿಸೆಂಬರ್ 11 ರಂದು ಮನೆ ಬಿಟ್ಟು ಹೋಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣದಾಖಲಾಗಿತ್ತು.
ಸಾಕು ಮಗಳು ನಾಪತ್ತೆಯಾಗಿರುವುದರಿಂದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್ ಶೆಟ್ಟಿ ರವರು ಸಮಾಜಕ್ಕೆ ಹೆದರಿಕೊಂಡು, ಮರ್ಯಾದೆಗೆ ಅಂಜಿ ಮನನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಆರೋಪಿ ಗಿರೀಶ್ ವಿರುದ್ದ ಪೊಕ್ಸೊ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ದ ಪೊಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಕಾಪು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




