December 15, 2025

ಮಂಗಳೂರು: ಕುದ್ರೋಳಿಯ ಲತೀಶ್ ನಾಯಕ್, ಇಂದ್ರಜಿತ್ ಕೊಲೆಯತ್ನ ಪ್ರಕರಣ: ಐವರು ಆರೋಪಿಗಳ ಅಪರಾಧ ಸಾಬೀತು

0
image_editor_output_image1295798017-1698732536281.jpg

ಮಂಗಳೂರು: ಮಂಗಳೂರಿನ ಕುದ್ರೋಳಿ ಸಮೀಪದ ಅಳಕೆ ಮಾರ್ಕೆಟ್ ಬಳಿ 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ ಐವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಸೋಮವಾರ ತೀರ್ಪು ನೀಡಿದ್ದಾರೆ.

ಮುಲ್ಕಿ ನಿವಾಸಿಗಳಾದ ರವಿಚಂದ್ರ ಯಾನೆ ವಿಕ್ಕಿ ಪೂಜಾರಿ ಯಾನೆ ಸೈಕೊವಿಕ್ಕಿ (32), ಆತನ ಸಹೋದರ ಶಶಿ ಪೂಜಾರಿ(30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್(28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದ ಆರೋಪಿಗಳು. ಈ ಪ್ರಕರಣದ ಇನ್ನೋರ್ವ ಆರೋಪಿ ಗಣೇಶ್ (28) ಎಂಬಾತ ತಲೆಮರೆಸಿದ್ದಾನೆ.

2015ರ ಜು.27ರಂದು ಸಂಜೆ 6:30ಕ್ಕೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಳಕೆ ಮಾರ್ಕೆಟ್‌ನ ಮುಂದೆ ಲತೀಶ್ ನಾಯಕ್ ತನ್ನ ಗೆಳೆಯರಾದ ಇಂದ್ರಜಿತ್, ಸಿದ್ಧಾರ್ಥ್, ಪ್ರತಾಪ್, ಮಿಥುನ್, ಸುಶಾಂತ್ ಅವರೊಂದಿಗಿದ್ದ.

ಮನೆಯಿಂದ ಕರೆ ಬಂದ ಮೇರೆಗೆ ಅಲ್ಲಿಂದ ಹೊರಟ ಲತೀಶ್ ನಾಯಕ್ ರಸ್ತೆ ದಾಟುತ್ತಿದ್ದಾಗ ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ಲತೀಶ್‌ನಿಗೆ ಢಿಕ್ಕಿ ಹೊಡೆದಿದ್ದರು.

ಬಳಿಕ ಕಾರಿನಿಂದ ಇಳಿದು ತಲವಾರನಿಂದ ಹಲ್ಲೆ ನಡೆಸಿದ್ದರು. ಲತೀಶ್‌ನನ್ನು ಬಿಡಿಸಲು ಬಂದ ಇಂದ್ರಜಿತ್‌ನ ಮೇಲೆ ಕೂಡ ದಾಳಿ ನಡೆಸಿದ್ದರು. ಇದರಿಂದ ಲತೀಶ್ ಮತ್ತು ಇಂದ್ರಜಿತ್ ಗಂಭೀರವಾಗಿ ಗಾಯಗೊಂಡಿದ್ದರು.

ಹಳೆಯ ದ್ವೇಷದಿಂದ ಕೊಲೆಗೆ ಯತ್ನಿಸಿದ್ದ ಆರೋಪಿಗಳು ಬಳಿಕ ಲತೀಶ್‌ನ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು ಎಂದು ತನಿಖೆ ನಡೆಸಿದ್ದ ಅಂದಿನ ಇನ್ಸ್‌ಪೆಕ್ಟರ್‌ಗಳಾದ ಟಿ.ಡಿ.ನಾಗರಾಜ್ ಮತ್ತು ಭಜಂತ್ರಿ ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!