ಮದ್ರಸ ಅಧ್ಯಾಪಕರ ಮೇಲೆ ಏಕಾಏಕಿ ಹಲ್ಲೆ: SMA ಮತ್ತು SJM ಜಂಟಿ ಖಂಡನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ವ್ಯಾಪ್ತಿಯ ಕೃಷ್ಣಾಪುರ ಸಮೀಪದ ಮದ್ರಸವೊಂದರ ಅಧ್ಯಾಪಕರೋರ್ವರ ಮೇಲೆ ರಾತ್ರಿ ವೇಳೆ ನುಗ್ಗಿ ಏಕಾಏಕಿ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿರುವ ಅಮಾನವೀಯ ಘಟನೆಯನ್ನು ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಮತ್ತು ಸುನ್ನೀ ಜಂ ಇಯ್ಯತ್ತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿ ಜಂಟಿಯಾಗಿ ಖಂಡಿಸಿದೆ
.
ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ಬೋಧಿಸುವ ಅಧ್ಯಾಪಕರಿಗೆ ನೈತಿಕವಾದ ಬೆಂಬಲ ನೀಡಿ ಅವರನ್ನು ಪ್ರೋತ್ಸಾಹಿಸುವ ಬದಲು ಈ ರೀತಿಯ ಅಮಾನವೀಯ ಕೃತ್ಯ ಗಳ ಮೂಲಕ ಅಧ್ಯಾಪಕ ಸಮೂಹವನ್ನು ಧೃತಿಗೆಡಿಸುವ ಸಾಧ್ಯತೆ ಇದೆ. ಉಂಟಾದ ಸಮಸ್ಯೆಯನ್ನು ಅಧ್ಯಾಪಕರನ್ನು ನೇಮಕಾತಿ ಮಾಡಿದ ಆಡಳಿತ ಸಮಿತಿಯ ಗಮನಕ್ಕೆ ತಾರದೆ ನೇರವಾಗಿ ಹಲ್ಲೆ ನಡೆಸಲಾಗಿದೆ.
ಕೆಲವೊಂದು ವ್ಯಕ್ತಿಗಳು ನಡೆಸುವ ಈ ರೀತಿಯ ಅನಾಗರಿಕ ವರ್ತನೆಗಳು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ಈ ದುರ್ವರ್ತನೆ ತೋರಿದ ವ್ಯಕ್ತಿಯ ಈ ತಪ್ಪು ಸಮಾಜದಲ್ಲಿ ಪುನರಾವರ್ತನೆ ಆಗದಿರಲು ಕಾನೂನು ಪಾಲಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಂಟಿ ಸಭೆ ಆಗ್ರಹಿಸಿದೆ.
ಎಸ್ ಎಂ ಎ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಎಂ ಬಿ ಮುಹಮ್ಮದ್ ಸಾಧಿಕ್, ಪಿಎಂ ಮುಹಮ್ಮದ್ ಮದನಿ , ಇಸ್ಮಾಯಿಲ್ ಸಅದಿ ಉರುಮಣೆ, ಬಶೀರ್ ಪಂಜಿಮೊಗರು, ಉಮರ್ ಮಾಸ್ಟರ್, KH ಇಸ್ಮಾಯಿಲ್ ಸಅದಿ ಬೆಂಗಳೂರು,ಇಬ್ರಾಹಿಂ ನಈಮಿ ಭಾಗವಹಿಸಿದ್ದರು.




