September 20, 2024

ಪುತ್ತೂರು: ನಿರ್ಮಾಣ ಹಂತದ ಮನೆಯ ಸಿಟೌಟ್ ಮೇಲ್ಚಾವಣಿ ಕುಸಿತ – ಕಾರ್ಮಿಕ ಮೃತ್ಯು, ಗುತ್ತಿಗೆದಾರನಿಗೆ ಗಂಭೀರ ಗಾಯ

0

ಪುತ್ತೂರು: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿನಿರ್ಮಾಣ ಹಂತದ ಮನೆಯ ಸಿಟೌಟ್‌ನ ಮೇಲ್ಛಾವಣಿ ಕುಸಿದು ಕಾರ್ಮಿಕನೋರ್ವ ಮೃತಪಟ್ಟು ಗುತ್ತಿಗೆದಾರ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿ ಶೇಖರ್ ಕುಲಾಲ್(45)ಮೃತಪಟ್ಟವರು.

ಶೇಖರ್ ಕುಲಾಲ್ ಅವರು ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ಕಮಲ ಎಂಬವರ ಮನೆಗೆ ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದು,ಮನೆಯ ಸಿಟೌಟ್‌ನ ಮೇಲ್ಚಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವಾಗ ಮೇಲ್ಚಾವಣೆ ಕುಸಿದು ಬಿದ್ದು ಶೇಖರ್ ಕುಲಾಲ್ ಹಾಗೂ ಜೊತೆಗೆ ಕೆಲಸ ಮಾಡಿಕೊಂಡಿದ್ದ ಕಾಂಟ್ರಾಕ್ಟರ್ ಸಂಜೀವ ಮೊಗೇರ ಎಂಬವರು ಗಂಭೀರ ಗಾಯಗೊಂಡಿದ್ದರು. ಶೇಖರ್ ಕುಲಾಲ್‌ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿಮಧ್ಯೆ ಮೃತಪಟ್ಟಿದ್ದು, ಸಂಜೀವ ಮೊಗೇರ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಸರಿಯಾಗಿ ಕ್ಯೂರಿಂಗ್ ಆಗದಿರುವ ಸ್ಥಳದಲ್ಲಿ ಕೆಲಸ ಮಾಡುವುದು ಜೀವಕ್ಕೆ ಅಪಾಯ ಎಂದು ತಿಳಿದಿದ್ದರೂ ಶೇಖರ್ ಕುಲಾಲ್‌ರವರನ್ನು ಕೆಲಸ ಮಾಡಿಸಿದ ಕಾಂಟ್ರಾಕ್ಟರ್ ಸಂಜೀವ ಮೊಗೇರ ಹಾಗೂ ಮನೆಯ ಮಾಲೀಕರಾದ ಕಮಲರವರ ನಿರ್ಲಕ್ಷ್ಯತನವೇ ಈ ಅವಘಡಕ್ಕೆ ಕಾರಣ ಎಂಬುದಾಗಿ ಆರೋಪಿಸಿ, ಮೃತ ಶೇಖರ್ ಕುಲಾಲ್ ಅವರ ಸಹೋದರ ದಿನೇಶ್ ಕುಲಾಲ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಶೇಖರ ಕುಲಾಲ್ ಅವರು ಪತ್ನಿ ಕುಸುಮಾವತಿ, ಪುತ್ರ ಧನ್ವಿತ್, ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!