ಮೂಡಿಗೆರೆಗೆ ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಳ್ತಂಗಡಿಯ ಯುವಕ ಪತ್ತೆ
ಮೂಡಿಗೆರೆ: ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದು, ಇದೀಗ ಆಕ್ಟೋಬರ್ 11 ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿ ಬಳಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ನಾಲ್ವರು ಯುವಕರು ದೇವರ ಮನೆಗೆ ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಯುವಕರ ನಡುವೆ ಯಾವುದೋ ವಿಚಾರದಲ್ಲಿ ಗಲಾಟೆ ನಡೆದು ಹೊಡೆದಾಟ ಮಾಡಿಕೊಂಡಿದ್ದರು. ನಂತರ ಕೋಪದಿಂದ ದೀಕ್ಷಿತ್ ಪೂಜಾರಿ ಬೇರೆಯಾಗಿ ಹೋಗಿದ್ದ. ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಕಾರ್ಯಾಚರಣೆ ಮುಂದುವರೆಸಿದ್ದರು.
ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆ ಮಂದಿ ಮಾಹಿತಿ ನೀಡಿದ್ದಾರೆ.