ಸ್ನೇಹಿತನನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಯತ್ನ: ಮೂವರು ಆರೋಪಿಗಳು ಸಿಕ್ಕಿಬಿದ್ದದ್ದು ಹೀಗೆ…
ಚಿತ್ರದುರ್ಗ: ಸ್ನೇಹಿತನನ್ನು ಬರ್ಬರವಾಗಿ ಕೊಲೆಗೈದು, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಕೋಟೆನಾಡಿನ ಖಾಕಿ ಪಡೆ ಯಶಸ್ವಿಯಾಗಿದೆ.
ಬೆಂಗಳೂರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ನಾಗೇಂದ್ರ ಹಾಗೂ ಯಾದಗಿರಿ ಮೂಲದ ರಾಜು ಪರಿಚಯವಾಗಿ ಉತ್ತಮ ಸ್ನೇಹಿತರಾಗಿದ್ದರು.
ಹೀಗಾಗಿ ಅವರಿಬ್ಬರ ಮಧ್ಯೆ ಹಣದ ವ್ಯವಹಾರ ಕೂಡ ಶುರುವಾಗಿದ್ದು, ಆಗಾಗ್ಗೆ ರಾಜು ಮನೆಗೆ ಬರುತ್ತಿದ್ದ ನಾಗೇಂದ್ರ ಮತ್ತು ರಾಜು ಪತ್ನಿ ನಡುವೆ ಅಕ್ರಮ ಸಂಬಂಧ ಆರಂಭವಾಗಿತ್ತು.
ಈ ವಿಚಾರ ತಿಳಿದ ರಾಜು, ತನ್ನ ಸ್ನೇಹಿತರಾದ ಮಾಳಿಂಗರಾಯ ಮತ್ತು ಶರಣು ಜೊತೆ ಸೇರಿ ಸ್ಕೆಚ್ ಹಾಕಿ, ಹಣ ವಸೂಲಿ ಮಾಡುವ ನೆಪದಲ್ಲಿ ನಾಗೇಂದ್ರನನ್ನು ಹೊರಗೆ ಕರೆತಂದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.
ಅಲ್ಲದೆ ಜುಲೈ 22ರಂದು ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹಿರಿಯೂರು ತಾಲೂಕಿನ ಚನ್ನಮ್ಮನಹಳ್ಳಿ ಬಳಿ ಶವ ಎಸೆದು ಅದನ್ನು ಅಪಘಾತ ಎಂದು ಬಿಂಬಿಸಿ ಪರಾರಿಯಾಗಿದ್ದರು.
ಹೀಗಾಗಿ ಅದು ಬಹುತೇಕ ಅಪಘಾತವೆಂದು ಎಲ್ಲರೂ ನಂಬಿದ್ದರು. ಈ ವೇಳೆ ಪ್ರಕರಣದ ತನಿಖೆ ಆರಂಭಿಸಿದ ಸಿಪಿಐ ಕಾಂತರಾಜ ನೇತೃತ್ವದ ಐಮಂಗಲ ಪೊಲೀಸರ ತಂಡ, ಇದು ಅಪಘಾತದಿಂದ ಆದ ಸಾವಲ್ಲ, ಅದು ಕೊಲೆಯೆಂದು ಪತ್ತೆಹಚ್ಚಿದ್ದಾರೆ.
ಪ್ರಕರಣದ ಆರೋಪಿಗಳಾದ ರಾಜು, ಮಾಳಿಂಗರಾಯ ಮತ್ತು ಶರಣು ಎನ್ನವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




