ಸಾಲದ ಹೊರೆ ಬೇಸತ್ತು ಹಿರಿಯ ಪತ್ರಕರ್ತ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ
ರಾಯಚೂರು: ಹಿರಿಯ ಪತ್ರಕರ್ತರೊಬ್ಬರು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತರು ಕೆ.ಎನ್.ರೆಡ್ಡಿ (57) ಎನ್ನಲಾಗಿದೆ.
ರಾಯಚೂರಿನ ಕಲ್ಲೂರು ಗ್ರಾಮದವರಾದ ರೆಡ್ಡಿ ಹಲವು ವರ್ಷಗಳಿಂದ ಕಲಬುರಗಿ ನಗರದ ದರಿಯಾಪುರದಲ್ಲಿ ಪತ್ನಿ ಹಾಗೂ ಪುತ್ರಿ ಜೊತೆ ವಾಸವಾಗಿದ್ದರು.
ಸಾಲದ ಹೊರೆ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ರೆಡ್ಡಿ ಅವರು ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಹಲವು ಇಂಗ್ಲಿಷ್ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು. ಜೆಸ್ಕಾಂನ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಆಗಿದ್ದರು. ಜೆ.ಎಚ್.ಪಟೇಲರ ಕುರಿತು ಪುಸ್ತಕಗಳನ್ನು ಬರೆದಿದ್ದರು. ಪೊಲೀಸ್ ಕಮಿಷನರ್ ಕಲಬುರಗಿ ಚೇತನ್ ಆರ್. ಮಾತನಾಡಿ ರೆಡ್ಡಿ ಅವರ ಆತ್ಮಹತ್ಯೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದರು.





