ವಿಟ್ಲ : ಬೈಕ್ ನಲ್ಲಿ ಬಂದ ಐವರಿಂದ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ: ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು
ವಿಟ್ಲ : ಬೈಕ್ ನಲ್ಲಿ ಬಂದ ಐದು ಮಂದಿ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಆ 16 ರಂದು ಪ್ರಕರಣ ದಾಖಲಾಗಿದೆ.
ಜಯ ಪ್ರಶಾಂತ, ಲಕ್ಷೀಶ ಮತ್ತು ಮೂರು ಮಂದಿಯ ಪ್ರಕರಣದ ಆರೋಪಿಗಳು.
ಕೇರಳದ ಕಾಸರಗೋಡು ಜಿಲ್ಲೆಯ ಪಾತೂರು ಗ್ರಾಮ ಮಂಜೇಶ್ವರ ನಿವಾಸಿ ಮೂಸಾ (55) ಹಲ್ಲೆಯಾದ ಬಗ್ಗೆ ದೂರು ನೀಡಿದವರು. ಆರೋಪಿಗಳ ವಿರುದ್ದ ಐಪಿಸಿ ಕಲಂ: 341,307,324,323,506,143,147,148,ಜೊತೆಗೆ 149 ಯಂತೆ ಪ್ರಕರಣ ದಾಖಲಾಗಿದೆ.
೧೫ರಂದು ಇಬ್ರಾಹಿಂ ಯಾನೆ ಮೋನು, ಹಮೀದ್ ಯಾನೆ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಸೇರಿ ನಾಲ್ಕು ಮಂದಿ ಮುಳಿಯ ಎಂಬಲ್ಲಿಂದ 5 ಜಾನುವಾರುಗಳಗಳನ್ನು ಖರೀದಿ ಮಾಡಿದ್ದಾರೆ. ಬಳಿಕ ಅದನ್ನು ಗೂಡ್ಸ್ ವಾಹನದಲ್ಲಿ ತುಂಬಿಸಿಕೊಂಡು, ಕಜೆ ಎಂಬಲ್ಲಿಗೆ ಸಾಗಿಸಲು ಯತ್ನ ನಡೆದಿದೆ ಎಂದು ದೂರಲಾಗಿದೆ.
ಆ.16ರಂದು ಮುಂಜಾನೆ ಐವರ ತಂಡವೊಂದು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮೂರು ಮೋಟಾರು ಸೈಕಲ್ ಮತ್ತು ಒಂದು ಕಾರನ್ನು ರಸ್ತೆಗೆ ಅಡ್ಡವಾಗಿಟ್ಟು ಅಕ್ರಮ ಕೂಟ ರಚಿಸಿ ಗೂಡ್ಸ್ ವಾಹನದಲ್ಲಿದ್ದ ನಾಲ್ಕು ಜನರನ್ನು ಎಳೆದು ಹಾಕಿ ಬೇಸ್ಬಾಲ್ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಕ್ರಮವಾಗಿ ಗೋ ಸಾಗಾಟ ಮಾಡಿರುವುದಾಗಿ ಇಬ್ರಾಹಿಂ ಯಾನೆ ಮೋನು, ಹಮೀದ್ ಯಾನೆ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಅವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





