December 16, 2025

ಪಡುಬಿದ್ರಿ: ಕಾಲೇಜಿನ ಕಾವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ

0
IMG-20230728-WA0033.jpg

ಪಡುಬಿದ್ರಿ: ಅದಮಾರಿನಲ್ಲಿರುವ ಕಾಲೇಜಿನ ರಾತ್ರಿ ಕಾವಲುಗಾರರೊಬ್ಬರು ಕುಂಜೂರು ಗ್ರಾಮದ ಯಶೋದಾ ಮಡಿವಾಳ ಎಂಬವರ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಎರ್ಮಾಳು ಬಡಾ ನಿವಾಸಿ ನವೀನ್ ಬಂಗೇರಾ (53) ಆತ್ಮಹತ್ಯೆಗೆ ಶರಣಾದವರು.

ಯಶೋದಾ ಮನೆಯವರು ಇಂದು ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, 100, 50 ಮತ್ತು 500ರ ನೋಟ್‌ಗಳು ಚೆಲ್ಲಿದ್ದು, ಕೆಲವು ನೋಟ್‌ಗಳನ್ನು ಹರಿದು ಎಸೆಯಲಾಗಿತ್ತು. ಈ ವಿಷಯವರಿತು ಸ್ಥಳಕ್ಕೆ ಬಂದಿದ್ದ ಸ್ಥಳೀಯರೊಬ್ಬರು ಮೊಬೈಲಲ್ಲಿ ಚಿತ್ರೀಕರಿಸಿ ಆಡಿಯೋ ಒಂದನ್ನೂ ಅಪ್‌ಲೋಡ್ ಮಾಡಿದ್ದು ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದರು.

ಇನ್ನು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅನತಿ ದೂರದಲ್ಲೇ ನವೀನ್ ಅವರ ಮೊಬೈಲ್ ಕೂಡಾ ಪತ್ತೆಯಾಗಿದೆ. ಸ್ಥಳದಲ್ಲಿದ್ದ ಪರ್ಸನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ನವೀನ್ ಅವರ ಫೊಟೋ ಮತ್ತು ಅದಮಾರು ಸಂಸ್ಥೆಯ ಪತ್ರ ಸಿಕ್ಕಿದೆ. ಇದರಿಂದಾಗಿ ನವೀನ್ ಅವರು ಬಾವಿಗೆ ಹಾರಿರಬೇಕೆಂಬ ಶಂಕೆ ದೃಢವಾಗಿದೆ.

ತಕ್ಷಣ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬಂದಿ ಬಾವಿಯಲ್ಲಿ ಹುಡುಕಾಡಿದಾಗ ನವೀನ್ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!