ಬೆಳ್ತಂಗಡಿ: ಕೊರಗಜ್ಜನ ಕಟ್ಟೆಗೆ ಬೆಂಕಿ: 13 ಮಂದಿಯ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಬಜಿರೆ ಗ್ರಾಮದ ಕೊರಗಜ್ಜ ಗುಡಿ ಚಪ್ಪರಕ್ಕೆ ಜು. 11ರಂದು ಬೆಂಕಿ ಕೊಟ್ಟು ಆರಾಧನ ಕೇಂದ್ರಕ್ಕೆ ಹಾನಿ ಉಂಟು ಮಾಡಿದ ಘಟನೆಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿ ಒಬ್ಬನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈಗ ಪ್ರತಿ ದೂರು ದಾಖಲಾಗಿದೆ. ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ ರಾಜೇಶ್ ನೀಡಿದ ದೂರಿನಂತೆ, ಕುಟುಂಬದವರು ಬಾಡಾರು ಎಂಬಲ್ಲಿ ಮನೆ ಸಮೀಪ ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಪ್ರದೀಪ್ ಕುಮಾರ್ ಹೆಗ್ಡೆ ತನ್ನ ಸಂಗಡಿಗರೊಂದಿಗೆ ಸೇರಿ ಅನಧಿಕೃತ ಟ್ರಸ್ಟ್ ರಚಿಸಿಕೊಂಡು ಸಾರ್ವಜನಿಕ ಹಣ ಸಂಗ್ರಹಣೆ ಹಾಗು ಮೋಸ, ವಂಚನೆ ಮಾಡುವ ದುರುದ್ದೇಶದಿಂದ ತನ್ನ ಮೇಲೆ ಹಾಗು ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ.
ಡಾ ರಾಜೇಶ್ ಹಾಗೂ ಕುಟುಂಬಿಕರಿಗೆ ಜೀವ ಬೆದರಿಕೆ ಒಟ್ಟುತ್ತಾ, ಹರೀಶ್ ಪೂಜಾರಿ ಉಳಿದ ಆರೋಪಿಗಳ ಕುಮ್ಮಕ್ಕು ಹಾಗೂ ಸಹಾಯದಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಅಪವಿತ್ರಗೊಳಿಸಿ, ಫಿರ್ಯಾದಿದಾರರು ಮತ್ತು ಕುಟುಂಬಸ್ಥರ ನಂಬಿಕಗೆ ದ್ರೋಹ ಮಾಡಿದ್ದಾರೆ.
ಈಗ ರಾಜೇಶ್ ಒಟ್ಟು 13 ಜನರ ವಿರುದ್ಧ ದೂರು ನೀಡಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ್ದಾರೆ.