ಬಂಟ್ವಾಳ | ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಸೇವಾ ಶುಲ್ಕ 2 ಪಟ್ಟು ಹೆಚ್ಚಳ: ಭಕ್ತರ ಆಕ್ರೋಶ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ದೈವ ಕ್ಷೇತ್ರ ಬಂಟ್ವಾಳ ತಾಲೂಕಿನ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಸೇವಾ ಶುಲ್ಕವನ್ನು ರಾಜ್ಯ ಮುಜರಾಯಿ ಇಲಾಖೆ ಏಕಾಏಕಿ ದುಪ್ಪಟ್ಟು ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ ಪಣೋಲಿಬೈಲು ಕ್ಷೇತ್ರಕ್ಕೆ ಊರು ಹಾಗೂ ಪರವೂರುಗಳಿಂದ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಬಂದು ಹರಕೆ ಸಲ್ಲಿಸುತ್ತಾರೆ.
ದೈವಕ್ಕೆ ಕೊಡುವ ಅಗೆಲು ಸೇವೆ ಮತ್ತು ಕೋಲ ಸೇವೆ ಈ ಕ್ಷೇತ್ರದ ಪ್ರಮುಖ ಸೇವೆಗಳಾಗಿದ್ದು, ಈ ಎರಡೂ ಸೇವೆಗಳ ಶುಲ್ಕವನ್ನು ಮುಜರಾಯಿ ಇಲಾಖೆ ಏರಿಕೆ ಮಾಡಿದೆ.
ಅಗೆಲು ಸೇವೆಯ ರಶೀದಿ ಬೆಲೆಯನ್ನು ಈ ಹಿಂದೆ ಇದ್ದ 25 ರೂ. 50 ರೂ. ಏರಿಸಲಾಗಿದ್ದು, ದೈವದ ಕೋಲದ ಸೇವೆಗೆ ಇದ್ದ 3000 ರೂ. ಬದಲಾಗಿ 5000 ರೂ.ಗೆ ಏರಿಸಲಾಗಿದೆ.
ಅಲ್ಲದೆ ಉಚಿತವಾಗಿ ನಡೆಯುತ್ತಿದ್ದ ವಾಹನ ಪೂಜೆಗೆ 75 ರೂ.ಗಳ ದರ ನಿಗದಿಪಡಿಸಲಾಗಿದೆ.




