February 4, 2026

ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೆ ಸಂಚಲನ: ಅಜಿತ್ ಪವಾರ್ ಬಂಡಾಯವೆದ್ದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ

0
image_editor_output_image1037685122-1688299533724

ಮುಂಬೈ: ಮಹಾರಾಷ್ಟ್ರದ ರಾಜಕೀಯದಲ್ಲಿ ಮತ್ತೆ ಸಂಚಲನ ಎದ್ದಿದೆ. ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಬಂಡಾಯವೆದ್ದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಭಾನುವಾರವೇ ಪ್ರಮಾಣ ವಚನ ಸ್ವೀಕರಿಸಿ ಡಿಸಿಎಂ ಪದವಿಗೇರಿದ್ದಾರೆ. 

ಇದರೊಂದಿಗೆ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ( ಎನ್ ಸಿಪಿ) ಒಡೆದು ಹೋಗಿದೆ. ಶರದ್ ಪವಾರ್ ಜೊತೆಗೆ ಕೆಲವು ಸಮಯದಿಂದ ಶೀತಲ ಸಮರ ನಡೆಸುತ್ತಿದ್ದ ಅಜಿತ್ ಪವಾರ್ ಇತ್ತೀಚೆಗೆ ತನಗೆ ವಿರೋಧ ಪಕ್ಷದ ನಾಯಕ ಸ್ಥಾನ ಬೇಡ, ರಾಜ್ಯಾಧ್ಯಕ್ಷ ಸ್ಥಾನ ಕೊಡುವಂತೆ ಹೇಳಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಮತ್ತು ಅವರ ಒಂದಷ್ಟು ಸಹವರ್ತಿಗಳು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಅಲ್ಲದೆ, ರಾಜಭವನದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎನ್‌ಸಿಪಿ ಪಕ್ಷದ ಹಿರಿಯ ನಾಯಕ ಛಗನ್ ಭುಜಬಲ್ ಸೇರಿದಂತೆ ಹಲವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ನೂತನ ಸಚಿವರಿಗೆ ರಾಜ್ಯಪಾಲ ರಮೇಶ್ ಬೈಸ್ ಪ್ರಮಾಣವಚನ ಬೋದಿಸಿದರು.

ಮಹಾರಾಷ್ಟ್ರದ ಮಾಜಿ ಗೃಹ ಸಚಿವರಾದ ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ಸಂಜಯ್ ಬನ್ಸೋಡೆ, ಅದಿತಿ ತಟ್ಕರೆ, ಧರ್ಮರಾವ್ ಮತ್ತು ಧನಂಜಯ್ ಮುಂಡೆ ಸಚಿವರಾಗಿ ಏಕನಾಥ ಶಿಂಧೆ ಸರ್ಕಾರದ ಭಾಗವಾಗಿದ್ದಾರೆ.‌ ಪ್ರಮಾಣ ವಚನ ಸಮಾರಂಭದ ಬಳಿಕ ಹೇಳಿಕೆ ನೀಡಿದ ಅಜಿತ್ ಪವಾರ್, ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ. ಜಗತ್ತಿನ ಮುಂಚೂಣಿ ದೇಶಗಳು ಮೋದಿ ಅವರನ್ನು ಒಪ್ಪಿಕೊಂಡಿವೆ. ನಾವು ಕೂಡ ಮೋದಿ ಅವರನ್ನು ಬೆಂಬಲಿಸಲು ಜೊತೆಯಾಗಿದ್ದೇವೆ. ನಾವು ಜೊತೆಗೂಡಿ ಮುಂದಿನ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆ ಎದುರಿಸುತ್ತೇವೆ. ಇದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಒಟ್ಟು 53 ಎನ್‌ಸಿಪಿ ಶಾಸಕರಿದ್ದಾರೆ. ಅಜಿತ್ ಪವಾರ್ ತನ್ನೊಂದಿಗೆ 40 ಮಂದಿ ಇದ್ದಾರೆಂದು ಹೇಳುತ್ತಿದ್ದಾರೆ. ಆಮೂಲಕ ಪಕ್ಷ ವಿರೋಧಿ ಚಟುವಟಿಕೆ ಎನ್ನುವ ತೂಗುಕತ್ತಿಯಿಂದ ಪಾರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರದಲ್ಲಿ ಬಿಜೆಪಿಯಿಂದ ಒಂಬತ್ತು, ಏಕನಾಥ ಶಿಂಧೆ ಬಣದಿಂದ 9 ಸಚಿವರಿದ್ದು ಈಗ ಎನ್‌ಸಿಪಿಯಿಂದ 9 ಮಂದಿ ಸಚಿವ ಸಂಪುಟ ಸೇರಿದ್ದಾರೆ.

ಇದಕ್ಕೂ ಮುನ್ನ ಎನ್ಸಿಪಿ ಶಾಸಕಾಂಗ ನಾಯಕ ಅಜಿತ್ ಪವಾರ್ ತನ್ನ ಮನೆಯಲ್ಲಿ ಶಾಸಕರು ಮತ್ತು ಪಕ್ಷದ ನಾಯಕರ ಸಭೆ ಕರೆದಿದ್ದರು. ಸಭೆಯಲ್ಲಿ ಶರದ್ ಪವಾರ್ ಭಾಗವಹಿಸಿರಲಿಲ್ಲ. ತನಗೇನು ಸಭೆಯ ಬಗ್ಗೆ ಗೊತ್ತಿರಲಿಲ್ಲ. ಅಜಿತ್ ಪವಾರ್ ಗೆ ಸಭೆ ಕರೆಯುವ ಅಧಿಕಾರ ಇದೆ, ಸಭೆ ನಡೆಸಿದ್ದಾರೆ ಎಂದಿದ್ದಾರೆ. ಆದರೆ ಸಭೆಯಲ್ಲಿ ಹಿರಿಯ ನಾಯಕ ಛಗನ್ ಭುಜಬಲ್, ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಪಾಲ್ಗೊಂಡಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಭಾಗವಹಿಸಿರಲಿಲ್ಲ. ಸಭೆಯ ಬಳಿಕ ನೇರವಾಗಿ ರಾಜಭವನಕ್ಕೆ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಒಟ್ಟಿನಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು ಮಹಾ ವಿಕಾಸ್ ಅಘಾಡಿ ಮೈತ್ರಿ ಪ್ರಭಾವ ಕುಂದುತ್ತಿದ್ದಂತೆ ಎನ್ ಸಿಪಿ ನಾಯಕರು ಹೊರ ನಡೆದಿದ್ದಾರೆ. ಒಂದು ವರ್ಷದ ಹಿಂದೆ ಕಾಂಗ್ರೆಸ್, ಎನ್ ಸಿಪಿ, ಶಿವಸೇನೆ ಮೈತ್ರಿ ಸರ್ಕಾರವನ್ನು ಒಡೆದು 40 ಶಾಸಕರೊಂದಿಗೆ ಏಕನಾಥ ಶಿಂಧೆ ಹೊರಬಂದಿದ್ದರು. ಇದೀಗ ಎನ್ ಸಿಪಿಯಿಂದ ಒಡೆದು ಅಜಿತ್ ಪವಾರ್ ಹೊರಬಂದಿದ್ದಾರೆ. ಬಹುತೇಕ ಶಾಸಕರು ಜೊತೆಗೆ ನಿಂತಿದ್ದರಿಂದ ಶರದ್ ಪವಾರ್ ಅತ್ತ ಏಕಾಂಗಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!