ಉಚಿತ ವಿದ್ಯುತ್ ಯೋಜನೆ: ನಾಳೆಯಿಂದ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಿ
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಗೆ ನಾಳೆಯಿಂದಲೇ ( ಜೂನ್ 15) ಅರ್ಜಿ ಸಲ್ಲಿಸಬಹುದಾಗಿದೆ.
ಮಾಸಿಕ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆ ಮಾಡುವವರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕಂಪ್ಯೂಟರ್ ಹಾಗೂ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಜೂನ್ 15 ರಿಂದ ಜುಲೈ 5 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ರಾಜ್ಯದಲ್ಲಿ 2.14 ಕೋಟಿ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸುವವರು ಆರ್ ಆರ್ ನಂಬರ್ ಜೊತೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದೆ.
ಎಲ್ಲಾ ಆಪ್ ಗಳಂತೆ ಪ್ಲೇ ಸ್ಟೋರ್, ಆಪಲ್ ಸ್ಟೋರ್ ಗಳಲ್ಲಿಯೂ ಗೃಹಜ್ಯೋತಿ ಆಪ್ ಲಭ್ಯವಿರಲಿದ್ದು, ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಅರ್ಜಿ ತುಂಬಬೇಕು. ಆಧಾರ್ ಕಾರ್ಡ್, ಆರ್.ಆರ್. ನಂಬರ್ ಗೆ ಲಿಂಕ್ ಆಗಬೇಕು. ಸ್ವಂತ ಮನೆ ಇರಲಿ, ಬಾಡಿಗೆ ಮನೆಯಿರಲಿ ಕರಾರು ಪತ್ರದ ದಾಖಲೆ ಇರಬೇಕು.




