ಮಂಗಳೂರಿನಲ್ಲಿರುವ ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಅಶೋಕ್ ರೈ ಮನವಿ
ರಾಜ್ಯದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದೆ.
ಗೃಹ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ಅವರು ಇದೇ ಮೊದಲ ಬಾರಿಗೆ ಇಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಕರಾವಳಿ ಕಾನೂನು ಸುವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ನಡುವೆ ಪುತ್ತೂರು ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿಯೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಆರಂಭಿಸಬೇಕೆಂದು ಗೃಹ ಸಚಿವರಿಗೆ ಮನವಿ ನೀಡಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ಎಸ್ಪಿ ಕಚೇರಿ ಆಗಬೇಕೆಂದು ನಾನು ಮನವಿ ಕೊಟ್ಟಿದ್ದೇನೆ.
ಇಷ್ಟು ವರ್ಷದಿಂದ ಮಂಗಳೂರಿನಲ್ಲೇ ಕಚೇರಿ ಇದೆ. ಅದನ್ನು ಕೂಡಲೇ ಪುತ್ತೂರಿಗೆ ಸ್ಥಳಾಂತರ ಮಾಡಬೇಕಾಗಿದೆ. ಅಲ್ಲಿ ಜಾಗ ಕಾದಿರಿಸಲಾಗಿದೆ. ಡಿಪಿಆರ್ ಆಗಿದೆ. ಆದೇಶ ಮಾತ್ರ ಬಾಕಿ ಇದೆ. ಈ ಬಗ್ಗೆ ತಾನು ಗೃಹ ಸಚಿವರ ಗಮನಕ್ಕೆ ತಂದಿದ್ದು, ಅವರು ಆದೇಶ ಮಾಡುವುದಾಗಿ ಹೇಳಿದ್ದಾರೆ.
ಬಜೆಟ್ನಲ್ಲೂ ಅನುದಾನವನ್ನು ಮೀಸಲಿಟ್ಟರೆ ಮುಂದಿನ 2 ವರ್ಷದೊಳಗೆ ಪುತ್ತೂರಿನಲ್ಲಿ ಸುಸಜ್ಜಿತ ಎಸ್ಪಿ ಆಫೀಸ್ ಆಗಲಿದೆ ಎಂದರು.




