September 17, 2024

ಬೆಳ್ತಂಗಡಿ: ಆಟೋ ಚಾಲಕ ಮತ್ತು ಸಹೋದರನ ಮೇಲೆ ತಲವಾರ್ ದಾಳಿ:
ಮೂವರು ಆರೋಪಿಗಳ ಬಂಧನ

0

ಬೆಳ್ತಂಗಡಿ: ಆಟೊ ರಿಕ್ಷಾ ಚಾಲಕ ಹಾಗೂ ಆತನ ಸಹೋದರನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಘಟನೆ ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಸಹೋದರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ರಾತ್ರಿಯೇ ಬಂಧಿಸಿದ್ದಾರೆ.

ಗೋವಿಂದೂರು ಶಾಲೆಯ ಬಳಿ ನೆಲ್ಲಿಗುಡ್ಡೆ ನಿವಾಸಿ ಆಟೋ ಚಾಲಕ ಹೈದರ್ ಹಾಗೂ ಆತನ ಅಣ್ಣ ರಫೀಕ್ ದಾಳಿಗೆ ಒಳಗಾದವರರಾಗಿದ್ದಾರೆ.

ತಲವಾರು ದಾಳಿ ನಡೆಸಿ ಕೊಲೆಯತ್ನ ನಡೆಸಿದ ಆರೋಪಿಗಳಾದ ಇದೇ ಪರಿಸರದ ನಿವಾಸಿ ಅಶುತೋಷ್ ಹಾಗೂ ಆತನ ಇಬ್ಬರು ಸಹಚರರನ್ನು ತಡರಾತ್ರಿಯೇ  ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ತಿಯ ವೇಳೆ ಹೈದರ್ ಹಾಗೂ ರಫೀಕ್ ತಮ್ಮ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಶುತೋಷ್ ಹಾಗೂ ಇತರ  ಇಬ್ಬರು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರ ಮೇಲೂ ತಲವಾರಿನಿಂದ ದಾಳಿ ನಡೆಸಲಾಗಿದ್ದು, ಚೂರಿಯಿಂದ ಇರಿಯಲಾಗಿದೆ. ಇದರಿಂದ ಹೈದರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ರಫೀಕ್ ಕೂಡಾ ಗಾಯಗೊಂಡಿದ್ದಾರೆ. ಬೊಬ್ಬೆ ಕೇಳಿ ಸ್ಥಳಿಯರು ಘಟನಾ ಸ್ಥಳಕ್ಕೆ ಧಾವಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಆರೋಪಿಗಳಾದ ಅಶುತೋಷ್ ಹಾಗೂ ಆತನ ಸಹಚರರು ಪರಾರಿಯಾಗುವ ಪ್ರಯತ್ನ ನಡೆಸಿದರೂ ಮೂವರನ್ನೂ ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದರೆ. ಘಟನೆ ನಡೆದ ತಕ್ಷಣವೇ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗೇರುಕಟ್ಟೆಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!