ಬಿಜೆಪಿ ಅಭ್ಯರ್ಥಿ ವಿರುದ್ದ ಕಳ್ಳತನ ಆರೋಪ ಸಾಬೀತು ಹಿನ್ನೆಲೆ:
ಮೋದಿ ಭಾಗವಹಿಸಬೇಕಾಗಿದ್ದ ಸಾರ್ವಜನಿಕ ಪ್ರಚಾರ ಸಭೆ ರದ್ದು
ಕಲಬುರಗಿ: ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲಿದ್ದ ಕಳ್ಳತನ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಿ ಮೋದಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪ್ರಚಾರ ಸಭೆ ನಡೆಸುವುದೆಂದು ನಿಗದಿಯಾಗಿತ್ತು. ಕೊನೆಕ್ಷಣದಲ್ಲಿ ಮೋದಿ ಚಿತ್ತಾಪುರಕ್ಕೆ ಪ್ರಚಾರ ಹೋಗುವುದನ್ನು ರದ್ದು ಪಡಿಸಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಮೇ 6 ರಂದು ಪಿಎಂ ಮೋದಿ ಭಾಗವಹಿಸಬೇಕಾಗಿದ್ದ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಲಾಗಿದೆ.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಹಲವಾರು ಅಪರಾಧ ಪ್ರಕರಣಗಳಿದ್ದು, ಈ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಲೇ ಇವೆ. ಇದೀಗ ಮಣಿಕಂಠನ ಮೇಲಿದ್ದ ಕಳ್ಳತನ ಪ್ರಕರಣ ಸಾಬೀತಾಗಿದ್ದು, ಎಚ್ಚೆತ್ತುಕೊಂಡ ಬಿಜೆಪಿ ಚಿತ್ತಾಪುರದಲ್ಲಿ ಮೋದಿಯವರು ಮಣಿಕಂಠ ರಾಠೋಡ್ ಪರ ನಡೆಸಬೇಕಿದ್ದ ಪ್ರಚಾರವನ್ನು ರದ್ದುಪಡಿಸಿದೆ.
ಮಷಿಕಂಠ ವಿರುದ್ಧ ಕರ್ನಾಟಕಕ್ಕೆ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲಿ ಸೇರಿದಂತೆ ಬರೋಬ್ಬರಿ 40 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪಡಿತರ ಅಕ್ಕಿ ಕಳ್ಳ ಸಾಗಣೆ, ಅಂಗನವಾಡಿ ಮಕ್ಕಳ ಹಾಲಿನ ಪುಡಿ ಕಳ್ಳ ಸಾಗಣೆ ಕೂಡ ಸೇರಿದೆ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ.
ಅಂಗನವಾಡಿ ಮಕ್ಕಳ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಮಣಿಕಂಠ ರಾಠೋಡ್ ಶಿಕ್ಷೆಗೆ ಗುರಿಯಾಗಿದ್ದು, ಪ್ರಕರಣ ಸಂಬಂಧ ರಾಠೋಡ್ ಅವರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಏಪ್ರಿಲ್ 28 ರಂದು ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದರು. ಮಣಿಕಂಠನ ಮೇಲೆ ಹಲವಾರು ಪ್ರಕರಣ ಇದೆ. ಸಿಎಂ ಅವರೇ ಆತನ ಪರ ಮತ ಯಾಚನೆ ಮಾಡುವುದು ದುರಂತ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.




