ಜೈಲಿನಲ್ಲಿರುವ ಅತೀಕ್ ಅಹ್ಮದ್ ಹತ್ಯೆ ಆರೋಪಿಯ ಸಾಮಾಜಿಕ ಜಾಲತಾಣ ಖಾತೆಗಳು ಸಕ್ರಿಯ
ಉತ್ತರ ಪ್ರದೇಶ: ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್ ಹತ್ಯೆ ಆರೋಪದಲ್ಲಿ ಜೈಲು ಪಾಲಾಗಿರುವ ಲವ್ಲೀಶ್ ತಿವಾರಿ ಎನ್ನುವಾತ ಜೈಲಿನಲ್ಲಿದ್ದರೂ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳು ಸಕ್ರಿಯವಾಗಿ ಬಳಸಲ್ಪುಡುತ್ತಿರುವುದು ಬಹಿರಂಗವಾಗಿದೆ.
ಪ್ರಯಾಗರಾಜ್ನಲ್ಲಿ ಏಪ್ರಿಲ್ 15 ರಂದು ಅತೀಕ್ ಅಹ್ಮದ್ ಹಾಗೂ ಆಶ್ರಫ್ ರನ್ನು ಲವ್ಲೀಶ್ ಹಾಗೂ ಆತನ ಇತರ ಇಬ್ಬರು ಸ್ನೇಹಿತರು ಟಿವಿ ವಾಹಿನಿಗಳ ಕ್ಯಾಮೆರಾ ಎದುರೇ ಶೂಟ್ ಮಾಡಿ ಸಾಯಿಸಿದ್ದರು. ಏಪ್ರಿಲ್ 19 ರಂದು ಆರೋಪಿಗಳ ಬಂಧನವಾಗಿತ್ತು. ಅವರನ್ನು ಪ್ರತಾಪ್ಗಢದ ಬಂಡಾ ಜೈಲಿನಲ್ಲಿರಿಸಲಾಗಿದೆ.
ಲವ್ಲೀಶ್ ತಿವಾರಿಯ ಮಹಾರಾಜ ಲವ್ಲಿಶ್ ತಿವಾರಿ ಚುಚು ಎಂಬ ಸಾಮಾಜಿಕ ತಾಣಗಳ ಖಾತೆಗಳಿಂದ ನಿತ್ಯ ಅನೇಕ ಪೋಸ್ಟ್ಗಳು ಪ್ರಕಟವಾಗುತ್ತಿರುವುದನ್ನು ಬಂಡಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೋಸ್ಟ್ಗಳಲ್ಲಿ ಧ್ವೇಷ ಭಾಷಣ ಹಾಗೂ ಧ್ವೇಷ ಭಾಷಣಕ್ಕೆ ಪ್ರಚೋಧನೆ ಕೊಡುವ ಇಮೇಜ್ ಪೋಸ್ಟರ್, ವಿಡಿಯೊಗಳನ್ನು ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಲವ್ಲೀಶ್ ತಿವಾರಿ ಅಕೌಂಟ್ಗಳನ್ನು ಯಾರು ಬಳಸುತ್ತಿದ್ದಾರೆ ಎಂಬುದನ್ನು ಶೀಘ್ರವೇ ಪತ್ತೆ ಹಚ್ಚಿ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ತಿಳಿಸಿದ್ದಾರೆ. ಮಹಾರಾಜ ಲವ್ಲಿಶ್ ತಿವಾರಿ ಚುಚು ಎಂಬ ಪ್ರೊಪೈಲ್ ಅನ್ನು ಲಾಕ್ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.




