ಕಾರ್ಕಳ: ಸ್ಫೋಟಕ ವಸ್ತು ಸಾಗಾಟ: ಮೂವರು ಆರೋಪಿಗಳ ಬಂಧನ, 30 ಇಲೆಕ್ಟ್ರಿಕ್ ಡಿಟೋನೇಟರ್ , 2 ದ್ವಿಚಕ್ರ ವಾಹನಗಳ ವಶ
ಕಾರ್ಕಳ : ಕಾರ್ಕಳದ ಸಾಣೂರಿನ ಮುರತ್ತಂಗಡಿ ಚುನಾವಣಾ ಚೆಕ್ಕ್ ಪೋಸ್ಟ್ ಮುಖಾಂತರ ಅಕ್ರಮವಾಗಿ ಸ್ಪೋಟಕ ವಸ್ತು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ 30 ಎಲೆಕ್ಟ್ರಿಕ್ ಡಿಟೋನೇಟರ್ , 2 ದ್ವಿಚಕ್ರ ವಾಹನಗಳನ್ನು ವಶಪಡಿಸಿದ್ದಾರೆ.
ಮಂಗಳೂರು ಪಚ್ಚನಾಡಿ ನಿವಾಸಿಗಳಾದ ನಾಗರಾಜ, ಶಂಕರ ಮತ್ತು ರಾಘವೇಂದ್ರ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಏಪ್ರಿಲ್ 28ರಂದು ಸಾಣೂರು ಮುರತ್ತಂಗಡಿಯಲ್ಲಿ ವಿಧಾನಸಭಾ ಚುನಾವಣಾ ಪ್ರಯುಕ್ತ ಉಡುಪಿ ಜಿಲ್ಲಾಡಳಿತದ ವತಿಯಿಂದ ಕಾರ್ಯನಿರ್ವಹಿಸುತ್ತಿದ್ದ ಚೆಕ್ಕ್ ಪೋಸ್ಟ್ ನಲ್ಲಿ ಕಾರ್ಕಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್ ಅವರು ತಪಾಸಣಾ ನಿರತರಾಗಿದ್ದಾಗ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ 2 ಸ್ಕೂಟಿಯನ್ನು ನಿಲ್ಲಿಸಿ ಪರಿಶೀಲಿಸಿದಾಗ 30 ಮಾರಕವಾದ ಸ್ಪೋಟಕ ವಸ್ತು ಎಲೆಕ್ಟ್ರಿಕ್ ಡಿಟೋನೇಟರ್ ಪತ್ತೆಯಾಗಿದ್ದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.