ಪಕ್ಷದ ಪರ ಪ್ರಚಾರ: ಹರೇಕಳ ಗ್ರಾಮ ಪಂಚಾಯತ್ನ ಪಿಡಿಒ ಅಮಾನತು
ಪಾವೂರು: ಹರೇಕಳ ಗ್ರಾಮ ಪಂಚಾಯತ್ನ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಶವಂತ ಬೆಳ್ಚಡ ಅವರನ್ನು ಅಮಾನತುಗೊಳಿಸಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ನೀಡಿರುವ ದೂರಿನ ಮೇರೆಗೆ ದ.ಕ. ಜಿಪಂ ಸಿಇಒ ಡಾ.ಕುಮಾರ ನೀಡಿದ ತನಿಖಾ ವರದಿಯನ್ನು ಆಧರಿಸಿ ಯಶವಂತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.
ಹರೇಕಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಯಶವಂತ ಬೆಳ್ಚಡ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದು, ಸರಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ದಾಖಲೆ ಸಮೇತ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದರು.




