ಆಂಧ್ರಪ್ರದೇಶದಲ್ಲಿ ಮುಂದುವರಿದ ಮಳೆ:
ಹೆದ್ದಾರಿ, ರೈಲು ಮಾರ್ಗ ಸಂಪರ್ಕ ಕಡಿತ
ಶರಾವತಿ: ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಪರಿಣಾಮ ಪ್ರಮುಖ ರಸ್ತೆ ಹಾಗೂ ರೈಲು ಮಾರ್ಗಗಳಲ್ಲಿನ ಸಂಚಾರ ಕಡಿದುಹೋಗಿದೆ. ಅದರಲ್ಲೂ, ಪೆನ್ನಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ದಕ್ಷಿಣ ಮತ್ತು ಪೂರ್ವ ಭಾಗಗಳಿಗೆ ಸಂಪರ್ಕ ಕಡಿತಗೊಂಡಿದೆ.
ನೆಲ್ಲೂರು ಜಿಲ್ಲೆಯ ಪಡುಗುಪಾಡು ಎಂಬಲ್ಲಿ, ಚೆನ್ನೈ–ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಕುಸಿತ ಕಂಡುಬಂದಿದೆ. ಈ ಕಾರಣಕ್ಕೆ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ನೂರಾರು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಕಿ.ಮೀ. ಉದ್ದಕ್ಕೂ ನಿಂತಿವೆ. ನೆಲ್ಲೂರು ಬಸ್ ನಿಲ್ದಾಣ ಬಸ್ಗಳಿಂದ ತುಂಬಿದೆ.
ಪಡುಗುಪಾಡು ಬಳಿ ರೈಲು ಹಳಿ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಕಾರಣ ಚೆನ್ನೈ–ವಿಜಯವಾಡ ಮಾರ್ಗದಲ್ಲಿ ಸಂಚರಿಸುವ ಕನಿಷ್ಠ 17 ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮೂರು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ ಇಲ್ಲವೇ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಎಸ್ಪಿಎಸ್ ನೆಲ್ಲೂರು ಜಿಲ್ಲೆಯಲ್ಲಿರುವ ಸೋಮಶಿಲ ಅಣೆಕಟ್ಟೆಯಿಂದ 2 ಲಕ್ಷ ಕ್ಯುಸೆಕ್ಗೂ ಅಧಿಕ ನೀರು ಬಿಟ್ಟಿರುವ ಕಾರಣ ಪ್ರವಾಹ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.