ಮಂಜೇಶ್ವರ: ಮಗಳನ್ನು ಬರ್ಬರವಾಗಿ ಹತ್ಯೆಗೈದ ತಂದೆ
ಮಂಜೇಶ್ವರ: ಮಾದಕ ವಸ್ತು ವ್ಯಸನಿ ತಂದೆಯೊಬ್ಬ ತನ್ನ ಪುತ್ರಿಯನ್ನೇ ಚೂರಿಯಿಂದ ಇರಿದು ಹತ್ಯೆಗೈದ ಭೀಭತ್ಸ ಘಟನೆಯೊಂದು ಮಂಜೇಶ್ವರದಲ್ಲಿ ನಡೆದಿದೆ.
ಕುಂಜತ್ತೂರು ಸಮೀಪದ ತೂಮಿನಾಡು ಹಿಲ್ ಟಾಪ್ ನಗರದ ನಿವಾಸಿ ಉಮ್ಮರ್ ಫಾರೂಕ್ ತನ್ನ ಪುತ್ರಿ ಮರಿಯಮತ್ ಜುಮೈರಾ(18) ಎಂಬಾಕೆಯ ಪಾಲಿಗೆ ಯಮದೂತನಾಗಿ ಬಂದಿದ್ದಾನೆ.
ಇಂದು ಸಂಜೆ ಕ್ಷುಲ್ಲಕ ವಿಚಾರಕ್ಕಾಗಿ ಪತ್ನಿ, ಪುತ್ರಿ ಜೊತೆ ಜಗಳ ಕೆರೆದಿದ್ದ ಉಮ್ಮರ್ ಫಾರೂಕ್ ಪುತ್ರಿಯ ಮೇಲೆ ಏಕಾಏಕಿ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ತಡೆಯಲು ಬಂದ ಪತ್ನಿಯ ಮೇಲೂ ನರರಾಕ್ಷಸ ದಾಳಿಗೆ ಮುಂದಾಗುತ್ತಿದ್ದಂತೆ ಪಕ್ಕದ ಕೋಣೆಗೆ ಹೋಗಿದ್ದರಿಂದಾಗಿ ಬಚಾವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪುತ್ರಿಯ ಚೀರಾಟ ಕೇಳಿಸಿಕೊಂಡ ಸ್ಥಳೀಯರು ಉಮ್ಮರ್ ಫಾರೂಕ್ ಮನೆಗೆ ಹೋಗಿ ನೋಡಿದಾಗ ಆತನ ರಾಕ್ಷಸೀ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣವೇ ಗಾಯಾಳು ಜುಮೈರಾಳನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆಯ ಉಸಿರು ನಿಂತಿದೆ.
ಸ್ಥಳಕ್ಕಾಗಮಿಸಿದ ಮಂಜೇಶ್ವರ ಠಾಣಾ ಪೊಲೀಸರು ಆರೋಪಿ ಉಮ್ಮರ್ ಫಾರೂಕ್ ನನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ವಿದೇಶದಿಂದ ಬಂದಿದ್ದ ಮಾದಕ ವ್ಯಸನಿಯ ರಾಕ್ಷಸೀ ಕೃತ್ಯದಿಂದ ಸ್ಥಳೀಯರು ತೀವ್ರ ಆಘಾತಕ್ಕೀಡಾಗಿದ್ದಾರೆ.




