ವಿಟ್ಲ: ಪುಣಚದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ
ವಿಟ್ಲ: ಭಾರತ ಜಗತ್ತಿಗೆ ಇತರ ದೇಶಗಳ ಮಧ್ಯೆ ಹತ್ತಾರು ವಿಚಾರಗಳಲ್ಲಿ ಪ್ರಗತಿ ಪಥದಲ್ಲಿ ಸಾಗುತ್ತಿದೆಯಾದರೂ, ದೇಶದ ಜನರ ಆಯುಷ್ಯದ ಪ್ರಮಾಣದಲ್ಲಿ ಸರಾಸರಿ 68 ವಯಸ್ಸಿಗಿಂತಲೂ ಇಳಿಮುಖವಾಗುತ್ತಿರುವುದು ಖೇದಕರ ಎಂದು ಕಂಪಾನಿಯೋ ಕಂಪನಿಯ ಪ್ರವರ್ತಕ ಸೀತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಪುಣಚ ಗ್ರಾಮ ಪಂಚಾಯತ್, ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮತ್ತು ಕಂಪಾನಿಯೋ ಪುತ್ತೂರು ಆಶ್ರಯದಲ್ಲಿ ನಡೆದ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಮನೆಯಲ್ಲಿಯೇ ಕುಳಿತು ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ,ವೆರಿಕೋಸ್ ವೇನ್, ಬೆನ್ನುನೋವು, ಪಾರ್ಶ್ವವಾಯು, ಥೈರಾಯ್ಡ್ ನಂತಹ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮಾತನಾಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಇಂತಹ ಶಿಬಿರಗಳು ಪರಿಣಾಮಕಾರಿಯಾಗಿದೆ. ಅತ್ಯಂತ ಸುಲಭವಾಗಿ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.
ಸಮಾರಂಭದಲ್ಲಿ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಪ್ಪ ಮೂಲ್ಯ, ಸಂಘದ ನಿರ್ದೇಶಕ ಉದಯಕುಮಾರ್ ದಂಬೆ ಭಾಗವಹಿಸಿದ್ದರು.
ಕಂಪಾನಿಯೋ ನೆಮ್ಮದಿ ವೆಲ್ ನೆಸ್ ಸೆಂಟರ್ ಪುತ್ತೂರು ಇದರ ಪ್ರವರ್ತಕ ಕೆ.ಪ್ರಭಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಜೇಂದ್ರ ರೈ ಬಿ. ವಂದಿಸಿದರು. ಕಂಪಾನಿಯೋ ಸಂಸ್ಥೆಯ ಪ್ರಶಾಂತ್, ಸಂಧ್ಯಾಶ್ರೀ ಸಹಕರಿಸಿದರು. ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.




