ಬಿ.ಜೆ.ಪಿ.ಯ ಕಾರ್ಯಕ್ರಮದಲ್ಲಿ ಆಝಾನ್ ಹಾಗೂ ಅಲ್ಲಾಹುವಿನ ಬಗ್ಗೆ ವಿವಾದಾತ್ಮಕ ಹೇಳಿಕೆ: ಈಶ್ವರಪ್ಪ ವಿರುದ್ಧ ಎಸ್.ಡಿ.ಪಿ.ಐ ಕಾವೂರು ಬ್ಲಾಕ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ
ಕಾವೂರು: ಬಿ.ಜೆ.ಪಿ.ಯ ಕಾರ್ಯಕ್ರಮದಲ್ಲಿ ಆಝಾನ್ ಹಾಗೂ ಅಲ್ಲಾಹುವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ ವಿರುದ್ದ ಎಸ್ ಡಿ ಪಿಐ ಪ್ರತಿಭಟನೆಯು ಕಾವೂರು ಜಂಕ್ಷನ್ ನಲ್ಲಿ ನಡೆಯಿತು. ಪ್ರತಿಭಟನೆಯ ನೇತೃತ್ವವನ್ನು ಕಾವೂರು ಬ್ಲಾಕ್ ಅಧ್ಯಕ್ಷರಾದ ಹನೀಫ್ ಕಾವೂರು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ಯಾಸೀನ್ ಆರ್ಕುಳ ಈ ಕ್ಷೇತ್ರದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಕ್ಷೇತ್ರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದು, ಸೋಲುವ ಭೀತಿಯಲ್ಲಿ ಹರಕಳು ಬಾಯಿಯ ಈಶ್ವರಪ್ಪನಿಂದ ವಿವಾದಾತ್ಮಕ ಹೇಳಿಕೆಯನ್ನು ಕೊಡಿಸಿ ಭಾವನಾತ್ಮಕವಾಗಿ ಗೆಲ್ಲಲು ಹೊರಟಿರುವ ಬಿ.ಜೆ.ಪಿ.ಯ ಈ ಕುತಂತ್ರ ರಾಜಕೀಯವನ್ನು ಈ ಕ್ಷೇತ್ರ ಶಾಂತಿ ಬಯಸುವ ಜನತೆಯು ಖಂಡಿತಾ ಸೋಲಿಸಲಿದ್ದಾರೆ ಎಂದು ಹೇಳಿದರು.
ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಮಾತನಾಡುತ್ತಾ ಈಶ್ವರಪ್ಪ ಪಕ್ಷದೊಳಗೆ ಬೆಪ್ಪನಾಗಿದ್ದಾನೆ,ಭ್ರಷ್ಟಾಚಾರ, 40 ಪರ್ಸಂಟ್ ಕಮಿಷನ್ , ಹಾಗೂ ಪಾಟೀಲ್ ಅತ್ಮಹತ್ಯೆ ಆರೋಪದಿಂದ ಮಂತ್ರಿ ಹುದ್ದೆಯನ್ನು ಕೂಡ ಕಳಕೊಂಡ ಈತ, ತನ್ನನ್ನು ಪಕ್ಷದೊಳಗೆ ಗುರುತಿಸಲು ವಿವಾದಾತ್ಮಕ ಹೇಳಿಕೆ ಮೂಲಕ ಬಿ.ಜೆ.ಪಿ.ಯನ್ನು ಮೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.
ಮುಖ್ಯ ಭಾಷಣ ಮಾಡಿದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಬಿ.ಜೆ.ಪಿ. ಅನ್ನುವುದು ಕೊಳಕು ಬಾಯಿಗಳ ನಾಯಕರನ್ನು ಸೃಷ್ಟಿಸುವ ಕಾರ್ಖಾನೆ, ಧಾರ್ಮಿಕ ವಿಚಾರಗಳನ್ನು ಅವಹೇಳನ ಮಾಡಿದ ಈಶ್ವರಪ್ಪ ಖಂಡಿತಾವಾಗಿಯೂ ಆಸ್ತಿತ್ವವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ ಎಂದರು. ಮುಸ್ಲಿಮರ ಭಾವನೆಗಲಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿ ಎರಡು ದಿನಗಳಾದರೂ ಇನ್ನು ಕೂಡ ಪೋಲೀಸರು ಸುಮೋಟಾ ಕೇಸು ಜಡಿಯದೇ ಇರುವುದು ವಿಚಿತ್ರವಾಗಿದೆ, ಪೋಲೀಸರ ನಡೆ ಈ ರೀತಿ ಯಾಕೆ ಎಂದು ಜಿಲ್ಲೆಯ ಜನರ ಮುಂದೆ ಉತ್ತರಿಸಬೇಕು ಎಂದರು. ಈಶ್ವರಪ್ಪನ ವಿರುದ್ಧ ಮಸೀದಿ ಕಮಿಟಿಯವರು ಮಾಡಿದ ಕೇಸಿಗೆ FIR ದಾಖಲಿಸಿ ಜೈಲಿಗಟ್ಟಬೇಕು, ಇಲಾಖೆಗೆ ಅದು ಸಾಧ್ಯವಿಲ್ಲಾ ಎಂದಾದರೆ ನಾವೂ ಕೋರ್ಟ್ ಮುಖಾಂತರ ಕಾನೂನಿನ ರುಚಿ ತೋರಿಸಲಿದ್ದೇವೆ ಎಂದು ಎಚ್ಚರಿಕೆ ಕೊಟ್ಟರು.
ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡುತ್ತಾ ಜಿಲ್ಲೆಯ ಜನತೆ ಶಾಂತಿ ಸೌಹಾರ್ಧತೆಯಿಂದ ಬದುಕುತ್ತಿರುವಾಗ ಎಲ್ಲಿಂದಲೋ ಬಂದ ಈ ಬೆಪ್ಪನಿಂದ ಆಝಾನ್ ಬಗ್ಗೆ ತಕರಾರು ಎತ್ತಿ ಜಿಲ್ಲೆಯಲ್ಲಿ ಸೌಹಾರ್ಧತೆಯನ್ನಹ ಕೆಡಿಸುವ ಕೆಲಸ ಮಾಡಿದ್ದಾರೆ, ಇವರಿಗೆ ಸಂಸ್ಕಾರ ಅನ್ನುವುದೇ ಇಲ್ಲ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮೂಡಬಿದರೆ ವಿಧಾನಸಭಾ ಕ್ಷೇತ್ರ ಅದ್ಯಕ್ಷ ಆಸಿಫ್ ಕೋಟೆಬಾಗಿಲು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ, ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು. ಇರ್ಫಾನ್ ಕಾಲೋನಿ ಕಾರ್ಯಕ್ರಮ ನಿರೂಪಿಸಿದರು.




