December 15, 2025

ಮೂಡುಬಿದಿರೆ: ಮೊಬೈಲ್ ಕೊಡದ ತಾಯಿ, ಎಸೆಸೆಲ್ಸಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ

0
image_editor_output_image-1816365536-1676954569012.jpg

ಮೂಡುಬಿದಿರೆ: 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತಾನು ಕೇಳಿದಾಗ ತಾಯಿ ಮೊಬೈಲ್ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ಮೂಡುಬಿದಿರೆಯ ವಾಲ್ಪಾಡಿ ಗ್ರಾಮದ ನಾಗದಡ್ಕದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಉಮೇಶ್ ಪೂಜಾರಿ ಎಂಬವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿಯಾಗಿದ್ದಾಳೆ. ಈಕೆ ಅಳಿಯೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಯುತಿಯ ತಂದೆ ಭಾನುವಾರ ಕೂಲಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿನ ನಂತರ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೋಗಲು ಸಿದ್ಧರಾದರು. ಈ ವೇಳೆ ತಾಯಿಯೂ ಹಿರಿಯ ಮಗಳು ಯುತಿಯನ್ನೂ ತಮ್ಮೊಂದಿಗೆ ಬರುವಂತೆ ಕೇಳಿದಾಗ, ತನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದು ನಿರಾಕರಿಸಿದ್ದಳು. ಈ ವೇಳೆ ಯುತಿ ತಾಯಿ ಕೈಯಲ್ಲಿದ್ದ ಮೊಬೈಲ್ ತನಗೆ ಕೊಟ್ಟು ಹೋಗುವಂತೆ ಕೇಳಿದ್ದಳು. ಮೊಬೈಲ್ ಈಗ ಕೊಡುವುದಿಲ್ಲ. ಶಿರ್ತಾಡಿಯಿಂದ ಬಂದ ಮೇಲೆ ಮೊಬೈಲ್ ಕೊಡುತ್ತೇನೆ ಎಂದು ಯುತಿಯ ತಾಯಿ ಹೇಳಿ ಹೊರಟುಹೋಗಿದ್ದಾರೆ.

ಮದ್ಯಾಹ್ನ ವಾಪಾಸಾದಾಗ ಮಗಳು ಕಾಣದಿರುವುದನ್ನು ಕಂಡು ಹುಡುಕಾಟದ ನಂತರ ಸಂಜೆ 4 ಗಂಟೆಗೆ ಮನೆಯ ಬಾವಿಯಲ್ಲಿ ಯುತಿಯ ಮೃತದೇಹ ಪತ್ತೆಯಾಗಿದೆ.

ಯುತಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಳು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮವಾಗಿದ್ದಳು. ಮೂಡುಬಿದಿರೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!