ವಿಟ್ಲ: ಹಿಂದೂ ರುದ್ರ ಭೂಮಿಯನ್ನು ಇತರೇ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ಪ್ರತಿಭಟನೆ: ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು: ಮುರಳಿಕೃಷ್ಣ ಹಸಂತಡ್ಕ ವಾಗ್ದಾಳಿ
ವಿಟ್ಲ: ಕನ್ಯಾನ ಗ್ರಾಮ ಪಂಚಾಯಿತಿ ಮುಂಭಾಗ ಹಿಂದೂ ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ರುದ್ರ ಭೂಮಿಯನ್ನು ಇತರೇ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು.
ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಸಮಾಜ ದೇಶ ಬದಲಾಗಿದೆ ಎಂಬುದನ್ನು ಅರಿಯದೆ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು. ಹಿಂದು ಸಮಾಜ ಜಾಗೃತವಾಗಿದ್ದು, ಹಿಂದು ವಿರೋಧಿ ಆಡಳಿತವನ್ನು ತೊಲಗಿಸುವ ಕಾರ್ಯ ಕನ್ಯಾನದಲ್ಲಿ ಮಾಡುತ್ತೇವೆ. ಹಿಂದು ರುದ್ರ ಭೂಮಿಯ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಹೊರಟವರು ಅನ್ಯ ಧರ್ಮದ ದಫನ ಭೂಮಿಯ ಪಕ್ಕದಲ್ಲಿ ಇದನ್ನು ಮಾಡುವರಾ ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿದರು. ಕನ್ಯಾನ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಗ್ರಾಮ ಪಂಚಾಯಿತಿವರೆಗೆ ಪ್ರತಿಭಟನಾ ಜಾಥಾ ನಡೆಯಿತು.
ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಸಹ ಸಂಚಾಲಕ ನರಸಿಂಹ ಮಾಣಿ, ವಿಶ್ವ ಹಿಂದು ಪರಿಷತ್ತ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ವಿ. ನಾಯ್ಕ, ಸದಸ್ಯರಾದ ಕೆ.ಪಿ. ರಘುರಾಮ ಶೆಟ್ಟಿ, ವನಿತಾ ಧರ್ಮರಾಜ್, ಮನೋಜ್ ಬನಾರಿ, ಧರಣಮ್ಮ ಗೌಡ, ಹಿಂದು ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೇಶವ ಗೌಡ ಕಾಣಿಚ್ಚಾರು, ಗೌರವಾಧ್ಯಕ್ಷ ಪೂವಪ್ಪ ಗೌಡ ಕಾಣಿಚ್ಚಾರು, ಕಾರ್ಯದರ್ಶಿ ಜಯಪ್ರಸಾದ್ ಬಾಳೆಕ್ಕೋಡಿ, ಜತೆ ಕಾರ್ಯದರ್ಶಿ ಸುಧಾಕರ ಗುರಿಮಾರ್ಗ, ಬಾಳಪ್ಪ ಎನ್. ಕಂಬ್ಳ, ಉಪಾಧ್ಯಕ್ಷ ರಾಜೇಶ್ ಭಟ್ ಕಾಣಿಚ್ಚಾರು, ಊರಿನ ಪ್ರಮುಖರಾದ ಕುಮಾರ್ ಭಟ್ ಬದಿಕ್ಕೋಡಿ, ಲೋಕೇಶ್ ಗೌಡ, ಕೃಷ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ.ಆರ್.ಅವರು ಕನ್ಯಾನ ಗ್ರಾಮದ ಬಾಳೆಕೋಡಿಯಲ್ಲಿ ರುದ್ರ ಭೂಮಿಗಾಗಿ 2.25ಎಕ್ರೆ ಇದ್ದು, 2021ಆಗಸ್ಟ್ 6 ರಂದು 78ಸೆಂಟ್ಸ್ ಕಟ್ ಮಾಡಿ ತ್ಯಾಜ್ಯ ಘಟಕಕ್ಕೆ ಮೀಸಲು ಇಡಲಾಗಿದೆ. ಸ್ಮಶಾನದ ಜಾಗದಲ್ಲಿ ಸ್ಮಶಾನದ ಕಟ್ಟಡ ಸಹಿತ ಅಗತ್ಯ ವ್ಯವಸ್ಥೆ ನಿರ್ಮಿಸಲಾಗಿದೆ. ಘನ ತ್ಯಾಜ್ಯಕ್ಕೆ ಜಾಗ ಖಾದಿರಿಸುವ ನಿಟ್ಟಿನಲ್ಲಿ ಹಲವು ಭಾಗದಲ್ಲಿ ನೋಡಿದರೂ, ಸಾಧ್ಯವಾಗದ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ರುದ್ರ ಭೂಮಿಯ ಜಾಗ ತುಂಡರಿಸುವ ನಿಟ್ಟಿನಲ್ಲಿ 2021 ಜುಲೈಯಲ್ಲಿ 6ಕ್ಕೆ ಹದಿನೈದು ದಿನಗಳ ಆಕ್ಷೇಪ ಇದೆಯಾ ಎಂದು ಕೇಳಲಾಗಿತ್ತು. ಆದರೆ ಆ ಸಂದರ್ಭ ಯಾವುದೇ ಆಕ್ಷೇಪ ಬಾರದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ತ್ಯಾಜ್ಯ ಘಟಕ್ಕೆ ಜಾಗ ಮಂಜೂರು ಮಾಡಿದ್ದಾರೆ ಎಂದರು.




