ಅಬುದಾಬಿ: ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿ ಅನುಸ್ಮರಣೆ ಕಾರ್ಯಕ್ರಮ
ಅಬುದಾಬಿ: ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುದಾಬಿ ಸಮಿತಿ ವತಿಯಿಂದ ನಮ್ಮನ್ನು ಅಗಲಿದ ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಮತ್ತು ಶಿಹಾಬ್ ತಂಗಳ್ ನ್ಯಾಷನಲ್ ಮಿಷನ್ ಇದರ ಅಧ್ಯಕ್ಷರು ಹಾಗೂ “ನಂಡೆ ಪೆಂಙಲ್” ಎಂಬ ಅಭಿಯಾನದ ಮೂಲಕ ಮುನ್ನೂರಕ್ಕೂ ಅಧಿಕ ಬಡ ಅನಾಥ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಿದ್ದ ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿ ಮತ್ತು ಮುಷರಫ್ ರವರ ಅನುಸ್ಮರಣೆ ಮತ್ತು ಖತಮುಲ್ ಕುರ್ಆನ್ ಸಮರ್ಪಣೆ ಹಾಗೂ ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುದಾಬಿ ನೂತನ ಸಮಿತಿಯ ಸಭೆ ಇತ್ತೀಚಿಗೆ ಶಹೀರ್ ಹುದವಿಯವರ ಅಧ್ಯಕ್ಷತೆಯಲ್ಲಿ ಅಬುದಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಯಾಹ್ಯಾ ಕೊಡ್ಲಿಪೇಟೆ ಸ್ವಾಗತಿಸಿದರು, ಅಬ್ದುಲ್ ರಹ್ಮಾನ್ ತಂಙಲ್ ಕೇರಳ ಕಾರ್ಯಕ್ರಮನ್ನು ಉದ್ಘಾಟಿಸಿ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದ ಅವರು ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸ್ವಲಾತ್ ಮತ್ತು ದಿಕ್ರ್ ಮಜ್ಲಿಸ್ ಗಳಲ್ಲಿ ಭಾಗವಹಿಸಿ ಪಾರತ್ರಿಕ ವಿಜಯಕ್ಕೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳಲು ಸಮಯವನ್ನು ಸದುಪಯೋಗ ಮಾಡಬೇಕೆಂದು ಸಲಹೆ ನೀಡಿದರು,
ಅನುಸ್ಮರಣೆ ಭಾಷಣ ಮಾಡಿದ ಝೈನ್ ಸಖಾಫಿ ಉಳ್ಳಾಲ ತನ್ನ ಸಂಪತ್ತು, ಶರೀರ, ಎಲ್ಲವನ್ನೂ ಸಾಮಾಜಿಕ ಧಾರ್ಮಿಕ ಕಾರ್ಯಕ್ಕಾಗಿ ಮೀಸಲಿಟ್ಟಂತಹ ನೌಷಾದ್ ಹಾಜಿ ಸೂರಲ್ಪಾಡಿ ನಮ್ಮ ನಡುವೆ ಜೀವಿಸಿದ್ದ ಒರ್ವ ನಿಸ್ವಾರ್ಥ ನಿಷ್ಕಳಂಕ ಸಮಾಜ ಸೇವಕರಾಗಿದ್ದರು, ಧಾರ್ಮಿಕ ವಿದ್ವಾಂಸರನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಅವರು ಕೇವಲ ನಲ್ವವತ್ತನಾಲ್ಕು ವರ್ಷದ ಜೀವನದಲ್ಲಿ ಜನರ ಅಪಾರ ಪ್ರೀತಿಗಳಿಸಿದ್ದರು ಎಂಬುದಕ್ಕೆ ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನ ಸಾಗರವೇ ಸಾಕ್ಷಿಯಾಗಿತ್ತು, ಎಂದು ನೌಷಾದ್ ಹಾಜಿ ರವರ ಸಮಾಜಸೇವೆಯನ್ನು ಸ್ಮರಿಸುತ್ತಾ ಜೀವನದಲ್ಲಿ ಉತ್ತಮ ಕಾರ್ಯವನ್ನು ಮಾಡುವವರು ವಿಜಯಿಗಳಾಗುತ್ತಾರೆ ಎಂದು ಹೇಳಿದರು, ಹನೀಫ್ ಅರಿಯಮೂಲೆ ಮಾತನಾಡಿ ಕರ್ನಾಟಕ ಎಸ್.ಕೆ.ಎಸ್.ಎಸ್.ಎಫ್ ಅಬುದಾಬಿ ಇದರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು, ತ್ವಾಹರವರು ಧನ್ಯವಾದ ಅರ್ಪಿಸಿದರು,ಕಾರ್ಯಕ್ರಮದ ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು.




