ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರು ಮೃತ್ಯು
ಶಿವಮೊಗ್ಗ:ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ವರ್ಷದ ಮೊದಲ ಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ಹಬ್ಬದ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಇಬ್ಬರು ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ತಾಲೂಕು ಕೊನಗನವಳ್ಲಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಲೋಕೇಶ್(32) ಸಾವನ್ನಪ್ಪಿದ್ದಾರೆ. ಲೋಕೇಶ್ ಶಿವಮೊಗ್ಗದ ಆಲ್ಕೊಳ ಬಡಾವಣೆಯ ನಿವಾಸಿ. ಇವರು ಕೊನಗನವಳ್ಳಿ ಗ್ರಾಮದಲ್ಲಿ ನಡೆದ ಸ್ಪರ್ಧೆ ನೋಡಲು ಹೋದಾಗ ಹೋರಿ ಗುದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಆಯೋಜಕರ ವಿರುದ್ದ ಪತ್ನಿ ಚಂದ್ರಮ್ಮ ದೂರು ದಾಖಲಿಸದ್ದಾರೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳೂರು ಗ್ರಾಮದಲ್ಲಿ ಜನವರಿ 14ರಂದು ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಂಗನಾಥ್(24) ಎಂಬುವರು ಸಾವನ್ನಪ್ಪಿದ್ದಾರೆ. ರಂಗನಾಥ್ ಮಾಳೂರು ಗ್ರಾಮದವರು. ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದಾಗ ಇವರ ಹೊಟ್ಟೆಗೆ ಹೋರಿ ತಿವಿದು ತೀವ್ರವಾಗಿ ಗಾಯಗೊಂಡಿದ್ದರು.




