ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವು: ವೈದ್ಯರ ಮೇಲೆ ಅನುಮಾನ ವ್ಯಕ್ತಪಡಿಸಿದ ಪೋಷಕರು
ಬೆಂಗಳೂರು: ಮೈಕೈ ನೋವು ಮತ್ತು ಜ್ವರ ಎಂದು ಸರ್ಜಾಪುರ ಬಳಿಯ ಸೋಂಪುರ ಗೇಟ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಬೆಳಗ್ಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಕಾಡ ಅಗ್ರಹಾರ-ಸೋಂಪುರ ಗೇಟ್ ಮುಖ್ಯರಸ್ತೆಯ ಕೊಮ್ಮಸಂದ್ರ ನಿವಾಸಿ ದೀಪಕ್(19) ಎಂದು ಗುರುತಿಸಲಾಗಿದೆ. ಓವರ್ ಡೋಸ್ನಿಂದಾಗಿ ಯುವಕ ಸಾವನ್ನಪ್ಪಿರುವುದಾಗಿ ಯುವಕನ ಪೋಷಕರು ಆರೋಪಿಸಿದ್ದಾರೆ.
ಕಳೆದ ಡಿಸೆಂಬರ್ 23ರಂದು ದೀಪಕ್ನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿ ಚೇತರಿಕೆ ಕಾಣದೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಸ್ನೇಹಿತರೊಡನೆ ಮೊಬೈಲ್ನಲ್ಲಿ ಮಾತನಾಡಿದ್ದ ದೀಪಕ್, ಆರೋಗ್ಯ ಸುಧಾರಿಸಿದೆ ಚೆನ್ನಾಗಿದ್ದೇನೆ ಎಂದಿದ್ದ. ಇದೀಗ ದೀಪಕ್ ಇಂದು ಸಾವನ್ನಪ್ಪಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.




