ಲಂಚದ ಬೇಡಿಕೆ: ಭೂ ದಾಖಲೆ ಕಚೇರಿಯ ಸರ್ವೇಯರ್ ಲೋಕಾಯುಕ್ತರ ಬಲೆಗೆ
ಹೊನ್ನಾಳಿ: ಇಲ್ಲಿನ ತಾಲ್ಲೂಕು ಕಚೇರಿ ವ್ಯಾಪ್ತಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ (ಎಡಿಎಲ್ಆರ್) ಕಚೇರಿಯ ಸರ್ವೇಯರ್ ಉದಯ್ ಚೌಧರಿ ಮನೆಯ ಇ–ಸ್ವತ್ತು ಮಾಡಿಕೊಡಲು ಸಾರ್ವಜನಿಕರೊಬ್ಬರೊಬ್ಬರಿಂದ ಲಂಚ ಪಡೆಯುವಾಗ ಸೋಮವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹರಳಹಳ್ಳಿ ಗ್ರಾಮದ ದೇವೇಂದ್ರ ಗೌಡ ಅವರ ಮನೆಯ ಇ–ಸ್ವತ್ತು ಮಾಡಿಸಲು ಅಳತೆ ಮಾಡಿ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಉದಯ್ ಚೌಧರಿ ಅವರು ₹ 3,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹೊನ್ನಾಳಿ–ಶಿವಮೊಗ್ಗ ರಸ್ತೆಯಲ್ಲಿರುವ ಸಾಯಿ ಫ್ಯುಯಲ್ ಸ್ಟೇಶನ್ ಬಳಿ ಸೋಮವಾರ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಎಸ್. ರಾಷ್ಟ್ರಪತಿ ಮತ್ತು ಎನ್.ಎಚ್. ಆಂಜನೇಯ ಅವರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.