ಮಂಗಳೂರು: ಬಾಲಕನ ಮೇಲೆ ಲಾಠಿ ಚಾರ್ಜ್: ಪೊಲೀಸರ ವಿರುದ್ದ ಸ್ಥಳೀಯರ ಆಕ್ರೋಶ
ಮಂಗಳೂರು: ನಗರದ ತಣ್ಣೀರಬಾವಿ ಬೀಚ್ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಘಟನೆ ನಡೆದಿದ್ದು, ಇದು “ಪೊಲೀಸರ ಅತಿರೇಕದ ವರ್ತನೆ” ಎಂದು ಸ್ಥಳೀಯರು ಕಿಡಿಕಾರಿದ ಘಟನೆ ನಡೆದಿದೆ.
ಪೊಲೀಸರು 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವುದು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ.
ವಿಕೇಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ ಬೀಚ್ಗೆ ಭೇಟಿ ನೀಡಿವವರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಟ್ರಾಪಿಕ್ ಜಾಮ್ ಆಗಿತ್ತು. ಈ ವೇಳೆ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಲಾಠಿ ಏಟಿನಿಂದ 6ನೇ ತರಗತಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಘೇರಾವ್ ಹಾಕಿದ್ದು, ಮೂವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಮೂವರು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




