February 3, 2026

ಬೋಳಿಯಾರ್ ಮಸೀದಿ ದಾಳಿ ಯತ್ನ:
ಸಂಘೀ ಕಿಡಿಗೇಡಿಗಳ ಶಾಂತಿ ಕದಡುವ ಕೃತ್ಯಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ

0
IMG-20211115-WA0013.jpg

ಬಂಟ್ವಾಳ: ಸಂಘಪರಿವಾರದ ದುಷ್ಕರ್ಮಿಗಳು ಬೋಳಿಯಾರ್ ತಾಜುಲ್ ಉಲಮಾ ಜುಮಾ ಮಸೀದಿಗೆ ಹೊಂಚು ಹಾಕಿ ದಾಳಿ ನಡೆಸಲು ಯತ್ನಿಸಿದ ದುಷ್ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ವಿಟ್ಲ ವಲಯ ಕಾರ್ಯದರ್ಶಿ ಹನೀಫ್ ಬೋಳಿಯಾರ್ ಖಂಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ದ್ವಿಚಕ್ರ ವಾಹನದಲ್ಲಿ ದುಷ್ಕರ್ಮಿಗಳು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರು. ನವೆಂಬರ್ 14ರ ರಾತ್ರಿ ಬೋಲಿಯಾರ್ ಸುಬ್ಬಗುಳಿ ತಾಜುಲ್ ಉಲಮಾ ಜುಮಾ ಮಸೀದಿ ಗೇಟ್ ಸಮೀಪ ಈ ಕಿಡಿಗೇಡಿಗಳು ಮಾರಾಕಾಸ್ತ್ರ ಝಳಪಿಸಿ, ಜೈ ಶ್ರೀ ರಾಮ್ ಘೋಷಣೆ ಕೂಗಿ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ, ಈ ವೇಳೆ ಮಸೀದಿಗೆ ನುಗ್ಗಿ ದಾಳಿ ನಡೆಸಲು ಯತ್ನಿಸಿದಾಗ ನಾಗರಿಕರ ಸಮಯ ಪ್ರಜ್ಞೆಯಿಂದ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತು ಕುರ್ನಾಡು ಫ್ರೆಂಡ್ಸ್ ಸರ್ಕಲ್ (ಕೆ ಎಫ್. ಸಿ ) ಕಚೇರಿಯಲ್ಲಿ ಅವಿತುಕೊಂಡಿದ್ದರು.

ತುರ್ತು ಕಾರ್ಯಾಚರಣೆ ನಡೆಸಿ, ದಾಳಿಗೆತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಿರುವ ಕೊಣಾಜೆ ಪೊಲೀಸರ ಕ್ರಮ ಸ್ವಾಗತಾರ್ಹ ಮತ್ತು ಸ್ಥಳೀಯರ ಸಮಯಪ್ರಜ್ಞೆ ಪ್ರಶಂಸಾರ್ಹ. ಸೌಹಾರ್ದದಿಂದಿರುವ ಬೋಳಿಯಾರ್ ಪರಿಸರದಲ್ಲಿ ಶಾಂತಿ ಕದಡಲು ಯತ್ನಿಸಿದ ಸಂಘಪರಿವಾರದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವಿತುಕೊಳ್ಳಲು ಸಹಕರಿಸಿದ ಕೆ.ಎಫ್.ಸಿ ಕಚೇರಿಯ ಅಧಿಕೃತರನ್ನು ವಿಚಾರಣೆಗೊಳಪಡಿಸಬೇಕು ಮತ್ತು ಈ ಘಟನೆಯ ದುರುದ್ದೇಶಪೂರಿತ ಸಂಚನ್ನು ಬಹಿರಂಗಪಡಿಸಬೇಕೆಂದು ಹನೀಫ್ ಬೋಳಿಯಾರ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!