ಬಂಟ್ವಾಳ: ಎಸ್.ವೈ.ಎಸ್ ನ 30ನೇ ವರ್ಷಾಚರಣೆಯ ಲಾಂಛನ ಮತ್ತು ಘೋಷಣೆ ಬಿಡುಗಡೆ
ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಇದರ ಮೂವತ್ತನೇ ವರ್ಷಾಚರಣೆಯ ಲಾಂಛನ ಮತ್ತು ಘೋಷಣೆ ಬಿಡುಗಡೆಯು ಕಾವಳಕಟ್ಟೆ ಅಲ್ ಖಾದಿಸಾ ಆವರಣದಲ್ಲಿ ಶನಿವಾರ ನಡೆಯಿತು.
ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರಹ್ಮಾನ್ ಸಖಾಫಿ ಜತೆಯಾಗಿ ಪ್ರಕಾಶನ ಕಾರ್ಯ ನೆರವೇರಿಸಿದರು.
ಇಸ್ಲಾಮೀ ತತ್ವಶಾಸ್ತ್ರದ ಕರ್ಮ ಮತ್ತು ವಿಶ್ವಾಸ ಕಾರ್ಯಗಳ ಪಾವನ ಪರಂಪರೆಯನ್ನು ಕಾಪಾಡಿಕೊಂಡು ಬರುವುದರ ಜತೆ ಭಾರತದ ಶ್ರೇಷ್ಠವಾದ ಸಾಂಸ್ಕೃತಿಕ- ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಪ್ರಾಯೋಗಿಕ ಆಂದೋಲನವನ್ನು ಸಂಘಟಿಸುವ ಇರಾದೆಯಿಂದ “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬ ಘೋಷ ವಾಕ್ಯವನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮೂವತ್ತನೇ ವರ್ಷಾಚರಣೆಯ ನಿರ್ವಹಣಾ ಸಮಿತಿ ‘ಪರ್ಲ್ ಬೋಡಿ’ಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ ಎಪಿಎಸ್ ಹುಸೈನುಲ್ ಅಹ್ದಲ್ ತಂಙಳ್ ಚಿಕ್ಕಮಗಳೂರು, ಸಯ್ಯಿದ್ ಹಾಮೀಂ ಶಿಹಾಬುದ್ದೀನ್ ತಂಙಳ್ ಬಾಳೆಹೊನ್ನೂರು, ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಉಪಾಧ್ಯಕ್ಷ ಯು.ಕೆ. ಮುಹಮ್ಮದ್ ಸಅದಿ ವಳವೂರು, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಮದನಿ, ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ, ಎಸ್. ವೈ.ಎಸ್. ಮಾಜಿ ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ, ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮುಹಮ್ಮದ್ ಮದನಿ ಅಳಕೆ, ಕರ್ನಾಟಕ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ. ಕಾಮಿಲ್ ಸಖಾಫಿ, ಪರ್ಲ್ ಬೋಡಿ ವರ್ಕಿಂಗ್ ಕನ್ವೀನರ್ ಅಶ್ರಫ್ ಸಅದಿ ಮಲ್ಲೂರು ಮುಂತಾದವರು ಉಪಸ್ಥಿತರಿದ್ದರು.
ಆಕರ್ಷಕ ಲೋಗೋ ಮತ್ತು ಘೋಷವಾಕ್ಯವನ್ನು ಎಸ್. ವೈ.ಎಸ್.ರಾಜ್ಯ ಮಾಧ್ಯಮ ಕಾರ್ಯದರ್ಶಿ ಹಮೀದ್ ಬಜಪೆ ವಿನ್ಯಾಸಗೊಳಿಸಿದ್ದಾರೆ.
ಎಸ್ ವೈ ಎಸ್.ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಕಾರ್ಯಕ್ರಮ ನಿರ್ವಹಿಸಿದರು.




