ಮಂಗಳೂರು: ಅನ್ಯ ಕೋಮಿನ ಜೋಡಿ ಮೇಲೆ ದಾಳಿ ಪ್ರಕರಣ: ಮೂವರ ಬಂಧನ
ಮಂಗಳೂರು: ನಂತೂರು ಸರ್ಕಲ್ ಬಳಿ ಗುರುವಾರ ಸಂಜೆ ಅನ್ಯ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸುರತ್ಕಲ್ ನಿವಾಸಿ ಮುತ್ತು(18), ಪ್ರಕಾಶ್(21) ಮತ್ತು ಅಸೈಗೋಳಿ ನಿವಾಸಿ ರಾಕೇಶ್(23) ಎಂದು ಗುರುತಿಸಲಾಗಿದೆ.
ನವೆಂಬರ್ 24ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಎಂದು ಹೇಳಿಕೊಂಡಿರುವ ಯುವತಿಯ ಜೊತೆಗೆ ಅಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯ್ಯದ್ ರಶೀಮ್ನನ್ನು ನಂತೂರು ಸರ್ಕಲ್ ಬಳಿ ಏಕಾಏಕಿ ಬಸ್ಸನ್ನು ಅಡ್ಡ ಹಾಕಿ ಒಳನುಗ್ಗಿದ ತಂಡ, ಯುವಕನ ಬಳಿ ಇದ್ದ ಐಡಿ ಕಾರ್ಡ್ ತೋರಿಸಲು ಹೇಳಿ ಬಳಿಕ ಬಸ್ಸಿನಿಂದ ಕೆಳಕ್ಕೆ ಎಳೆದು ಹಾಕಿ ಹಲ್ಲೆ ನಡೆಸಿದ್ದರು.
ಇನ್ನು ಆತನೊಂದಿಗಿದ್ದ ಭಿನ್ನ ಕೋಮಿನ ಯುವತಿಗೂ ಅಶ್ಲೀಲ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದು, ಆರೋಪಿಗಳು ದೊಣ್ಣೆ, ಬೆತ್ತ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಸೈಯ್ಯದ್ ರಶೀಮ್ ಕದ್ರಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.





