ಉಡುಪಿ ಕೃಷ್ಣ ಮಠದ ರಥಬೀದಿ ಪರಿಸರಕ್ಕೂ ಬಂದಿದ್ದ ಕುಕ್ಕರ್ ಸ್ಫೋಟದ ಆರೋಪಿ ಉಗ್ರ ಶಾರೀಕ್!
ಉಡುಪಿ: ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿ ಉಗ್ರ ಶಾರೀಕ್ ಕೃಷ್ಣ ಮಠದ ರಥಬೀದಿ ಪರಿಸರಕ್ಕೆ ಅಕ್ಟೋಬರ್ನಲ್ಲಿ ಬಂದಿದ್ದ ಬಗ್ಗೆ ಮಂಗಳೂರಿನ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ವಿವಿಧೆಡೆ ಪರಿಶೀಲನೆ ನಡೆಸಿದ್ದಾರೆ.
ಶಾರೀಕ್ನ ಮೊಬೈಲ್ ಪರಿಶೀಲನೆ ಸಂದರ್ಭ ರಥಬೀದಿಯಿಂದ ಕರೆ ಮಾಡಿರುವುದು ಕಂಡುಬಂದಿದ್ದು, ಪೊಲೀಸರು ರಥಬೀದಿಗೆ ಆಗಮಿಸಿ, ಕೃಷ್ಣ ಮಠ ಆತನ ಗುರಿ ಆಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಕೃಷ್ಣ ಮಠದ ರಥಬೀದಿ ಸುತ್ತಲಿನ ಅಂಗಡಿಗಳಲ್ಲಿರುವ ಸಿಸಿ ಕೆಮರಾ ಫೂಟೇಜ್ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾರೀಕ್ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ವೇಳೆ ರಥಬೀದಿ ಪರಿಸರದಲ್ಲಿರುವ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಆತನ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿರುವುದು ತಿಳಿದು ಬಂದಿದೆ.
ಇನ್ನಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆಕೆಯು ತನ್ನ ಮೊಮ್ಮಗನಿಗೆ ಕರೆ ಮಾಡಿರುವುದಾಗಿ ತಿಳಿಸಿದ್ದಾಳೆ. ಮೊಮ್ಮಗನನ್ನು ಅತಿಯಾಗಿ ಪ್ರೀತಿಸುವ ಆಕೆ ಯಾರೇ ಸಿಕ್ಕರೂ ಅವರಿಂದ ಮೊಬೈಲ್ ಪಡೆದು ಆತನಿಗೆ ಕರೆ ಮಾಡುವುದು ರೂಢಿ. ಎಂದಿನಂತೆ ಆಕೆ ಶಾರೀಕ್ನ ಮೊಬೈಲ್ನಿಂದಲೂ ಕರೆ ಮಾಡಿರಬೇಕು ಎಂದು ತಿಳಿದುಬಂದಿದೆ.





