ಕುಂದಾಪುರ: ಕಿಡ್ನ್ಯಾಪ್ ಪ್ರಕರಣ: 24 ಗಂಟೆಗಳಲ್ಲಿ ಬೇಧಿಸಿದ ಪೊಲೀಸರು
ಕುಂದಾಪುರ: ಕಾಲೇಜು ವಿದ್ಯಾರ್ಥಿಯೊಬ್ಬ ಅಪಹರಣಗೊಂಡ ಪ್ರಕರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಕುಂದಾಪುರ ಪೊಲೀಸರು ಪ್ರಕರಣ ಬೇಧಿಸಿ ಸಂಬಂಧಿಸಿದವರನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕುಂದಾಪುರ ತಾಲೂಕಿನ ಸಿದ್ಧಾಪುರದ ಜನ್ಸಾಲೆ ಎಂಬಲ್ಲಿನ ಗೋವಿಂದ ಶೆಟ್ಟಿ ಎಂಬುವರ ಮಗ ಶಶಾಂಕ ಪ್ರಾಯ (21 ವರ್ಷ) ಅಪಹರಣಗೊಳಗಾದ ವಿದ್ಯಾರ್ಥಿ.
ಶಶಾಂಕ್ ಅಕ್ಟೋಬರ್ 31ರಂದು ಬೆಳಿಗ್ಗೆ 8.30ಕ್ಕೆ ಕಾಲೇಜಿಗೆ ಹೋಗಿದ್ದ. ಬಳಿಕ 9.30ರ ಸುಮಾರಿಗೆ ಶಶಾಂಕ ತನ್ನ ಮೊಬೈಲ್ ನಿಂದ ತಂದೆ ಗೋವಿಂದ ಶೆಟ್ಟಿಯವರ ಮೊಬೈಲ್ ಗೆ ಕರೆ ಮಾಡಿ ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕ್ರೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, 30 ಲಕ್ಷ ಹಣ ನೀಡುವಂತೆ ಒತ್ತಾಯಿಸಿ ಭಯ ಪಡಿಸಿರುವುದಾಗಿ ತಿಳಿಸಿದ್ದಾನೆ.
ಇನ್ನು ಆತನನ್ನು ಅಪಹರಿಸಿದ್ದಾನೆ ಎನ್ನಲಾದ ಆರೋಪಿಯು ಶಶಾಂಕ್ ನ ತಂದೆಯೊಂದಿಗೆ ಮಾತನಾಡಿ ರೂ. 30 ಲಕ್ಷ ಹಣವನ್ನು ನೀಡಿ ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದ.
ಘಟನೆ ನಡೆದು ಎರಡು ದಿನಗಳಾದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ಕಿರಣ ಎಂಬಾತನನ್ನು ಕುಷ್ಟಗಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





