ರಕ್ತದ ಪ್ಲೇಟ್ ಲೆಟ್ ಗಳ ಬದಲಿಗೆ ಹಣ್ಣಿನ ರಸದ ಡ್ರಿಪ್ ಹಾಕಿದ ವೈದ್ಯರು: ಡೆಂಗ್ಯೂ ರೋಗಿ ಸಾವು
ಲಕ್ನೋ: ಡೆಂಗ್ಯೂ ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಪ್ಲೇಟ್ ಲೆಟ್ ಗಳ ಬದಲಿಗೆ ಹಣ್ಣಿನ ರಸದ ಡ್ರಿಪ್ ಹಾಕಿದ ಪರಿಣಾಮ ರೋಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಘಟನೆ ಬಳಿಕ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಬಯಲಾದ ನಂತರ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮೃತ ರೋಗಿಯ ಕುಟುಂಬ ಸದಸ್ಯರು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
32 ವರ್ಷದ ಡೆಂಗ್ಯೂ ರೋಗಿಗೆ ಪ್ರಯಾಗ್ ರಾಜ್ ನ ಆಸ್ಪತ್ರೆಯಲ್ಲಿ ಪ್ಲಾಸ್ಮಾ(ರಕ್ತದ ಪ್ಲೇಟ್ ಲೆಟ್) ಬದಲು ಮೂಸಂಬಿ ರಸದ ಡ್ರಿಪ್ ಹಾಕಿದ್ದರು, ಇದರ ಪರಿಣಾಮ ರೋಗಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.




