ಕೋಟ: ಪಡಿತರ ಅಕ್ಕಿಗಾಗಿ ಹೊಡೆದಾಟ, ಆಸ್ಪತ್ರೆಗೆ ದಾಖಲು
ಕೋಟ: ಕೋಟದ ವಡ್ಡರ್ಸೆ ಎಂ.ಜಿ. ಕಾಲನಿಯಲ್ಲಿ ಕುಟುಂಬದ ಪಾಲಿನ ಪಡಿತರ ಅಕ್ಕಿಗಾಗಿ ಅಕ್ಕ- ತಂಗಿ ನಡುವೆ ಹೊಡೆದಾಟ ನಡೆದು ಅಕ್ಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ.
ಜ್ಯೋತಿ (32) ಗಾಯಗೊಂಡ ಗೃಹಿಣಿಯಾಗಿದ್ದಾರೆ.
ಮನೆಯಲ್ಲಿ ತಂಗಿ ಆಶಾ ಇದ್ದು ಅವಳಲ್ಲಿ ಸರಕಾರದಿಂದ ಸಿಗುವ ಉಚಿತ ಪಡಿತರ ಅಕ್ಕಿಯಲ್ಲಿ ತನ್ನ ಪಾಲಿಗೆ ಬಂದ ಅಕ್ಕಿಯನ್ನು ನೀಡುವಂತೆ ಕೇಳಿದಾಗ ಆಶಾ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮಾತಿಗೆ ಮಾತು ಬೆಳೆದು ಜ್ಯೋತಿಯವರಿಗೆ ಮರದ ದೊಣ್ಣೆಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಇನ್ನು ತೀವ್ರವಾಗಿ ಗಾಯಗೊಂಡ ಅವರನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಅಲ್ಲಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




