ಪರೀಕ್ಷಾ ದಿನದಂದು ಬಲವಂತವಾಗಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ
ಜಾರ್ಖಂಡ್ : ಪರೀಕ್ಷಾ ದಿನದಂದು ಶಿಕ್ಷಕಿಯೊಬ್ಬರು ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಜಮ್ಶೆಡ್ಪುರದಲ್ಲಿ ಶುಕ್ರವಾರ ನಡೆದಿದೆ.
ಜಮ್ಶೆಡ್ಪುರದ ಬಾಲಕಿಯರ ಶಾಲೆಯಲ್ಲಿ ಓದುತ್ತಿದ್ದ 9 ನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆಗೆಂದು ಓದಿ ಎಲ್ಲಾ ಸಿದ್ಧತೆಗಳೊಂದಿಗೆ ಶಾಲೆಗೆ ಬಂದಿದ್ದಾಳೆ ಈ ವೇಳೆ ಪರೀಕ್ಷಾ ಕೊಠಡಿಗೆ ಬಂದ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿ ತನ್ನ ಸಮವಸ್ತ್ರದಲ್ಲಿ ಪೇಪರ್ ಚೀಟಿಗಳನ್ನು ಬಚ್ಚಿಟ್ಟಿದ್ದಾಳೆ ಎಂದು ಅನುಮಾನಗೊಂಡಿದ್ದಾರೆ, ಈ ವೇಳೆ ಶಿಕ್ಷಕಿ ವಿದ್ಯಾರ್ಥಿನಿಯನ್ನು ಪಕ್ಕದ ಕೊಠಡಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದಾರೆ ಆದರೆ ಎಲ್ಲೂ ಚೀಟಿ ಸಿಕ್ಕಿರಲಿಲ್ಲ.
ಪರೀಕ್ಷೆ ಬರೆದು ಮನೆಗೆ ಬಂದ ವಿದ್ಯಾರ್ಥಿನಿ ಶಾಲೆಯಲ್ಲಿ ಆದ ಅವಮಾನ ತಾಳಲಾರದೆ ಮನನೊಂದು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಮನೆಯವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ, ವಿದ್ಯಾರ್ಥಿನಿಯ ಅರೋಗ್ಯ ಸ್ಥಿತಿ ಗಂಭೀರವಾಗಿದ್ದು ಸುಮಾರು ೮೦% ದೇಹದ ಭಾಗ ಸುಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.




