ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ಝಡ್ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧ ರದ್ದು: ಮರಳುಗಾರಿಕೆ ನಡೆಸಲು ಆದೇಶ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್ಝಡ್ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿದ್ದ ನಿಷೇಧವನ್ನು ಪ್ರಶ್ನಿಸಿ 27 ಮಂದಿ ತಾತ್ಕಾಲಿಕ ಪರವಾನಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಿಆರ್ಝಡ್ ವಲಯದಲ್ಲಿ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಅ. 10ರಂದು ಆದೇಶ ನೀಡಿದೆ.
ಸಿಆರ್ಝಡ್ ವಲಯದಲ್ಲಿ ಮರಳು ಗಾರಿಕೆಗೆ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ತಾತ್ಕಾಲಿಕ ಪರವಾನಿಗೆ ಹೊಂದಿದ್ದ 30 ಮಂದಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸಿಆರ್ಝಡ್ ವಲಯದಲ್ಲಿ ಮಾನವ ಶ್ರಮದ ಮೂಲಕ ಮರಳುಗಾರಿಕೆ ನಡೆಸುವ ಬಗ್ಗೆ ಸೆ. 3ರಂದು ಆದೇಶಿಸಿತ್ತು.
ಬಳಿಕ ಇನ್ನೂ 27 ಮಂದಿ ತಾತ್ಕಾಲಿಕ ಪರವಾ ನಿಗೆ ದಾರರು ಸಲ್ಲಿಸಿದ್ದ ಅರ್ಜಿಯ ವಿಚಾ ರಣೆ ನಡೆಸಿದ ಹೈಕೋರ್ಟ್ ಅವರ ತಾತ್ಕಾಲಿಕ ಪರವಾನಿಗೆಗಳಿಗೂ ವಿಧಿಸಿದ್ದ ನಿಷೇಧವನ್ನು ರದ್ದುಗೊಳಿಸಿದೆ.
ಸೆ. 3ರ ಆದೇಶದಲ್ಲಿ ಉಲ್ಲೇಖೀಸಿರುವ ಎಲ್ಲ ಅಂಶಗಳು ಈ ಆದೇಶದಲ್ಲೂ ಅನ್ವಯವಾಗುತ್ತಿದ್ದು ಯಂತ್ರೋಪಕರಣಗಳನ್ನು ಬಳಸದೆ ಮಾನವಶ್ರಮದ ಮೂಲಕ (ಮ್ಯಾನ್ಯುವಲ್) ಮರಳುಗಾರಿಕೆ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಆದೇಶದಲ್ಲಿ ಹೇಳಿದೆ.
ಉಡುಪಿ ಜಿಲ್ಲೆಯಲ್ಲಿ ಸಿಆರ್ಝಡ್ ವಲಯದಲ್ಲಿ ಮರಳುಗಾರಿಕೆೆಗೆ ನಿಷೇಧ ವಿಧಿಸಿ ಹಸುರು ಪೀಠ (ಗ್ರೀನ್ ಟ್ರಿಬ್ಯೂನಲ್) ನೀಡಿದ್ದ ಆದೇಶದ ಆಧಾರದಲ್ಲಿ ದಕ್ಷಿಣ ಕನ್ನಡದಲ್ಲೂ ಸಿಆರ್ಝಡ್ ವಲಯದಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸಲಾಗಿತ್ತು.




