ವಿಟ್ಲ: ಅಮಾಯಕ ಇಬ್ಬರು ಮುಸ್ಲಿಂ ಬಾಲಕಿಯರ ಮೇಲೆ ಹಲ್ಲೆ ಪ್ರಕರಣ: ಪ್ರಕರಣ ರಾಜಿಮಾತುಕತೆ ಮೂಲಕ ಇತ್ಯಾರ್ಥ: ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಒತ್ತಾಯ
ವಿಟ್ಲ: ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾಲಕಿಯರು ಮನೆ ಬಿಟ್ಟು ತೆರಳಿದ್ದು, ಅವರ ಹುಡುಕಿಕೊಂಡು ಬಂದ ಊರಿನ ಯುವಕರು ದಾರಿಯಲ್ಲಿ ಸಿಕ್ಕಿದ ಮುಸ್ಲಿಂ ಸಮುದಾಯದ ಅಮಾಯಕ ಬೇರೆ ಇಬ್ಬರು ಬಾಲಕಿಯರಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಇತ್ತಂಡದವರು ರಾಜಿ ಮಾತುಕತೆ ಮೂಲಕ ಇತ್ಯಾರ್ಥಗೊಳಿಸಿದ್ದಾರೆ.
ರಾಜಿಮಾತುಕತೆ:
ಸ್ವಯಂ ಘೋಷಿತ ಸಮಾಜ ಸೇವಕರಿಂದ ಹಲ್ಲೆಗೊಳಗಾದ ಅಪ್ರಾಪ್ತ ಬಾಲಕಿ ಸಹಿತ ಇಬ್ಬರು ಬಾಲಕಿಯರು ಅವರ ಹೆತ್ತವರ ಜತೆ ಪೊಲೀಸರಿಗೆ ದೂರು ನೀಡುವ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಲು ತೆರಳಿದ್ದರು. ಇತ್ತ ಪೊಲೀಸರು ಯುವತಿಯರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ತೆರಳಿದಾಗ ಅತ್ತ ಇಬ್ಬರು ಬಾಲಕಿಯರು ಮತ್ತು ಅವರ ಕಡೆಯವರು ಆಸ್ಪತ್ರೆಯಿಂದ ಹಿಂತಿರುಗಿದ್ದರು.
ಇತ್ತ ಪೊಲೀಸರು ಮಧ್ಯೆರಾತ್ರಿ ವರೆಗೂ ಆಸ್ಪತ್ರೆಯಲ್ಲಿ ಹುಡುಕಿ ಹುಡುಕಿ ಸುಸ್ತಾಗಿದ್ದರು. ಎಲ್ಲಿ ಅವರ ಸುಳಿವು ಸಿಗದ ಕಾರಣ ಹಿಂತಿರುಗಿದ್ದಾರೆ. ಹಲ್ಲೆ ಘಟನೆಯನ್ನು ಖಂಡಿಸಿ ಹಲ್ಲೆಕೋರರನ್ನು ಪೊಲೀಸರಿಗೊಪ್ಪಿಸಿದ ಮುಖಂಡರು ಈ ಪ್ರಕರಣವನ್ನು ರಾಜಿಮಾತುಕತೆ ಮೂಲಕ ಮುಗಿಸಿದ ಬಗ್ಗೆ ಕೆಂಡಮಂಡಲಾಗಿದ್ದಾರೆ. ಸಾರ್ವಜನಿಕವಾಗಿ ಅಮಾಯಕರ ಯುವತಿ ಮೇಲೆ ಹಲ್ಲೆ ನಡೆಸಿದ್ದು, ಖಂಡನೀಯ. ಪೊಲೀಸರು ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ
ಘಟನೆ ವಿವರ:
ಸಾಲೆತ್ತೂರು ನಿವಾಸಿ ಆಟೋ ಚಾಲಕನ ಪುತ್ರಿ ತನ್ನ ಸ್ನೇಹಿತೆ ಮತ್ತೊಬ್ಬಳು ಯುವತಿ ಜತೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಬಿಟ್ಡು ತೆರಳಿದ್ದರು.ಈ ಬಗ್ಗೆ ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಕೆಲ ಸ್ವಯಂ ಘೋಷಿತ ಸಮಾಜ ಸೇವಕರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ವಿಟ್ಲಯಲ್ಲಿ ಹುಡುಕಾಡುತ್ತಿದ್ದಾಗ ಕುದ್ದುಪದವು ಮೂಲದ ಇಬ್ಬರು ಯುವತಿಯರು ಕಾಣಿಸಿದ್ದು, ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಬುರ್ಖಾ ತೆಗೆದಾಗ ಅವರು ಬೇರೆಯವರು ಎಂದು ತಿಳಿದಾಗ ಪೇಚಿಗೆ ಸಿಲುಕಿದ್ದಾರೆ. ಬಳಿಕ ಸಾರ್ವಜನಿಕರು ಹಲ್ಲೆ ನಡೆಸಿದವರನ್ನು ಪೊಲೀಸರಿಗೆ ಒಪ್ಪಿಸಿದ್ದರು.
ನಾಪತ್ತೆಯಾಗಿದ್ದ ಇಬ್ಬರು ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರನ್ನು ವಿಟ್ಲ ಠಾಣೆಗೆ ಕರೆಯಿಸಿ, ಬುದ್ದಿವಾದ ಹೇಳಿ ಮನೆಯವರ ಜತೆ ಕಳುಹಿಸಿಕೊಟ್ಟಿದ್ದರು.
ಹಲ್ಲೆಗೊಳಗಾದ ಇಬ್ಬರು ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದು, ವಿಟ್ಲ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು.

.




