NIA ಸರ್ಚ್ ಆಪರೇಷನ್ ಸಾಮಾನ್ಯ ಪ್ರಕ್ರಿಯೆ ಇದರಲ್ಲಿ ಗೊಂದಲ, ಗಾಳಿಮಾತಿಗೆ ಅವಕಾಶ ಬೇಡ: ಪೊಲೀಸ್ ಆಯುಕ್ತ ಶಶಿಕುಮಾರ್
ಮಂಗಳೂರು: ನೆಲ್ಲಿಕಾಯಿ ರಸ್ತೆಯಲ್ಲಿ ಪ್ರತಿಭಟನಾ ನಿರತರನ್ನು ಚದುರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಮಾಹಿತಿ ಹರಡುವವರ ಮೇಲೆ ನಾವು ಕಣ್ಣಿದ್ದೇವೆ’ ಎಂದು ಎಚ್ಚರಿಸಿದರು.
‘ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ದಾಳಿ ವಿರೋಧಿಸಿ ಕೆಲವರು ಘೋಷಣೆಗಳನ್ನು ಕೂಗುತ್ತಿದ್ದರು. ಪೊಲೀಸರು ಅಥವಾ ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಬಾರದು ಎಂದು ತಿಳಿಹೇಳಿದೆವು. ಬಂದರು ಏರಿಯಾ ತುಂಬಾ ಸೂಕ್ಷ್ಮ ಪ್ರದೇಶ. ನಮ್ಮ ಮಾತು ಕೇಳಲಿಲ್ಲ, ಹೀಗಾಗಿ ಅವರನ್ನು ಬಂಧಿಸಬೇಕಾಯಿತು’ ಎಂದು ಹೇಳಿದರು.
‘500 ಜನರು ಸೇರಿದ್ದಾರೆ, ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ರಸ್ತೆತಡೆ ನಡೆಯುತ್ತಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಜೋಕಟ್ಟೆ ಮತ್ತು ಕಾವೂರು ಬಳಿ ಒಂದಿಷ್ಟು ಜನರು ಸೇರಿದ್ದರು. ನಾವು ಪ್ರತಿಭಟನೆಗೆ ಅವಕಾಶ ಕೊಡೆದೆ ಚದುರಿಸಿದೆವು. ಈಗ ಬಂದರು ಪ್ರದೇಶಕ್ಕೆ ಬಂದಿದ್ದ 60 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದೇವೆ. ಬೆಳಿಗ್ಗೆ 8 ಗಂಟೆಯಿಂದ ಎಲ್ಲ ಮುಖ್ಯ ಅಂಗಡಿ ಮುಗ್ಗಟ್ಟುಗಳು ತೆರೆಯಲಿವೆ. ಇದು ಮುಖ್ಯ ವಾಣಿಜ್ಯ ಸ್ಥಳ. ಹೀಗಾಗಿ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸಲ್ಲ. ಎನ್ಐಎ ಸರ್ಚ್ ಆಪರೇಷನ್ ಎನ್ನುವುದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಗೊಂದಲ, ಗಾಳಿಮಾತಿಗೆ ಅವಕಾಶ ಬೇಡ’ ಎಂದು ಅವರು ಮನವಿ ಮಾಡಿದರು.




